×
Ad

ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ಮೋದಿ ಪ್ರಧಾನಿಯಾಗುವುದಿಲ್ಲ-ಸಚಿವ ಖಾದರ್

Update: 2019-03-27 23:03 IST

ಪುತ್ತೂರು: ಅಭಿವೃದ್ಧಿಯ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಿಫಲತೆಯನ್ನು ಕಂಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ ಎಂದು ರಾಜ್ಯ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮೋದಿ ಸರ್ಕಾರದಲ್ಲಿ ಸುಪ್ರಿಂ ಕೋರ್ಟ್‍ನ ನ್ಯಾಯಾಧೀಶರು ತನಗೆ ದಮ್ಮು ಕಟ್ಟುವ ಪರಿಸ್ಥಿತಿಯಿದೆ ಎಂದಿರುವುದು, ಆರ್‍ಬಿಐ ಗವರ್ನರ್ ರಾಜೀನಾಮೆ ನೀಡಿರುವುದು, ಸಿಬಿಐ ಅಧಿಕಾರಿ ರಾಜೀನಾಮೆ, ನೋಟು ಅಮಾನ್ಯತೆ, ರಫೇಲ್ ಒಪ್ಪಂದ ಪ್ರಕರಣಗಳು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ರಫೇಲ್ ದಾಖಲಾತಿ ಕಳವಾಗಿದೆ ಎಂದು ಹೇಳಿಕೆ ನೀಡಿ ದೇಶವೇ ತಲೆ ತಗ್ಗಿಸುವಂತೆ ಮೋದಿ ಮಾಡಿದ್ದಾರೆ ಎಂದರು.

ಪಾಕಿಸ್ಥಾನಕ್ಕೆ ಹೋಗಿ ಚಹಾ ಕುಡಿಯುವ ಪ್ರಧಾನಿ ಮೋದಿಯವರು ಅವರು ನಡೆಸಿದ ಮಾರಣ ಹೋಮಕ್ಕೆ ಬಲಿಯಾದ ದೇಶದ ಸೈನಿಕರ ಮನೆಗೆ ಭೇಟಿ ಕೊಟ್ಟು ಸಾಂತ್ವನ ನೀಡುವ ಕೆಲಸ ಮಾಡಿಲ್ಲ. ನೋಟು ಅಮಾನ್ಯದಿಂದಾಗಿ 150ಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ. ಅವರ ಬಗ್ಗೆ ವಿಚಾರಿಸಿಲ್ಲ. ಮರಣದ ಬಗ್ಗೆ ವರದಿ ಕೇಳಿಲ್ಲ ಇಂತಹ ಮಾನವೀಯತೆ ಇಲ್ಲದ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ.

ಪಠಾಣ್‍ಕೋಟ್ ತನಿಖೆಗೆ ಪಾಕಿಸ್ಥಾನದ ಐಎಸ್‍ಐ ತಂಡಕ್ಕೆ ಅವಕಾಶ ನೀಡಿರುವುದು ಕೇಂದ್ರದ ಮೂರ್ಖತನದ ರಾಜತಾಂತ್ರಿಕತೆಯಾಗಿದೆ. ಕೇಂದ್ರ ಸರ್ಕಾರದಿಂದ ಬಡವರ ಹೊಟ್ಟೆ ತುಂಬಿಸುವ ಯಾವುದೇ ಯೋಜನೆ ಜಾರಿಯಾಗಿಲ್ಲ ಎಂದು ಆರೋಪಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ 10 ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಲೋಕಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಸಂಬಂಧಿಸಿ, ಸಿಪಿಸಿಆರ್‍ಐ ಬೇರೆ ರಾಜ್ಯಕ್ಕೆ ವರ್ಗಾವಣೆ ಬಗ್ಗೆ ಮತ್ತು ಜಿಲ್ಲೆಯ ಹೆಮ್ಮಯ ಬ್ಯಾಂಕ್ ಎನಿಸಿದ್ದ ವಿಜಯಾ ಬ್ಯಾಂಕ್ ಮರ್ಜಿಯ ಬಗ್ಗೆ, ಬಿಎಸ್‍ಎನ್‍ಎಲ್ ಬಗ್ಗೆ ಚಕಾರವೆತ್ತಲಿಲ್ಲ. ಇಂತಹ ಸಂಸದರಿಂದ ಜಿಲ್ಲೆಯ ಜನತೆಗೆ ನಿರೀಕ್ಷೆಯಿಲ್ಲ. ಅದಕ್ಕಾಗಿ ಈ ಬಾರಿ ಯುವಕರಾಗಿದ್ದು ತನ್ನ ಧರ್ಮವನ್ನು ಆಚರಿಸುವುದರೊಂದಿಗೆ ಇತರ ಧರ್ಮವನ್ನು ಗೌರವಿಸುವ ಮಿಥುನ್ ರೈ ಅವರನ್ನು ಜಿಲ್ಲೆಯ ಮತದಾರರು ಬೆಂಬಲಿಸಲಿದ್ದಾರೆ ಎಂದರು.

ಮಾಜಿ ಸಚಿವ ಹಾಗೂ ಹಿರಿಯರಾದ ಜನಾರ್ಧನ ಪೂಜಾರಿಯವರು ಈ ಬಾರಿಯ ಲೋಕಸಭಾ ಚುನಾವಣೆಯ ಸಾರಥ್ಯವನ್ನು ವಹಿಸಿಕೊಂಡು ಮುನ್ನಡೆಸಲಿ ದ್ದಾರೆ ಎಂದ ಸಚಿವರು ಅವರ ನೇತೃತ್ವದಲ್ಲಿ ಮಿಥುನ್ ರೈ ಜಯಪಡೆಯಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ವಿಮಾನ ನಿಲ್ದಾಣ ಖಾಸಗೀಕರಣ ರದ್ದು ಪಡಿಸಲಾಗುವುದು. ಸಿಪಿಸಿಆರ್ ಮರಳಿ ರಾಜ್ಯದಲ್ಲಿ ಉಳಿಸಲಾಗುವುದು. ಹಳ್ಳಿ ಹಳ್ಳಿಗೆ ಬಿಎಸ್‍ಎನ್‍ಎಲ್ ಬ್ರಾಡ್ ಬಾಂಡ್ ಸೇವೆ ವಿಸ್ತರಿಸಲಾಗುವುದು, ಆಶಾ, ಅಂಗವನಾಡಿ ಕಾರ್ಯಕರ್ತೆಯರಿಗೆ ಹಾಗೂ ಎಎನ್‍ಎಂಗಳಿಗೆ ಸೇವಾ ಭದ್ರತೆ ನೀಡಲಾಗುವುದು. ವಿಜಯ ಬ್ಯಾಂಕ್ ಉಳಿಸಿಕೊಳ್ಳಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಪಕ್ಷದ ಚುನಾವಣಾ ಉಸ್ತುವಾರಿ ಸವಿತಾ ರಮೇಶ್, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಪತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಹಾಗೂ ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News