ಇದು ಪ್ರಜಾಪ್ರಭುತ್ವ, ಸರ್ವಾಧಿಕಾರದ ನಡುವಿನ ಚುನಾವಣೆ: ವಿನಯ ಕುಮಾರ್ ಸೊರಕೆ

Update: 2019-03-30 17:06 GMT

ಉದ್ಯಾವರ, ಉಡುಪಿ, ಮಾ.30: ಎ.18ರಂದು ನಡೆಯಲಿರುವ ಲೋಕಸಭಾ ಚುನಾವಣೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕೆ ಅಥವಾ ಸರ್ವಾಧಿಕಾರ ಬರಬೇಕೇ ಎಂಬುದನ್ನು ನಿರ್ಧರಿಸುವ ಚುನಾವಣೆ. ಈ ದೇಶ ಒಪ್ಪಿಕೊಂಡ ಜಾತ್ಯಾತೀತ ಸಂವಿಧಾನಕ್ಕೆ ಅಪಾಯ ಎದುರಾಗುವ ಲಕ್ಷಣಗಳು ಕಾಣುತ್ತಿವೆ. ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಇದು ದೇಶದ ಐಕ್ಯತೆಗೆ ಮಾರಕವಾದುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಉದ್ಯಾವರ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಜರಗಿದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಈ ದೇಶ ಅಖಂಡತೆಯಿಂದ ಜಾತ್ಯಾತೀತ ವಾಗಿ ಉಳಿಯಬೇಕಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾದ ಪ್ರಮೋದ್ ಮಧ್ವರಾಜ್‌ರನ್ನು ಗೆಲ್ಲಿಸಬೇಕಾಗಿದೆ ಎಂದವರು ನುಡಿದರು.

ಒಬ್ಬ ಕ್ರಿಯಾಶೀಲ ಅಭಿವೃದ್ಧಿಯ ಕನಸುಳ್ಳ ಪ್ರಮೋದ್ ಮಧ್ವರಾಜ್ ಆಯ್ಕೆಯಾಗಿ ಬಂದರೆ ಸ್ವಸ್ಥ ಸಮಾಜದ ಕನಸು ಕಾಣುವ ಮಂದಿಯ ಕನಸು ಈಡೇರುತ್ತದೆ. ತಾನು ಮತ್ತು ಪ್ರಮೋದ್ ಮಧ್ವರಾಜ್ ರಾಜ್ಯ ಗಮನಿಸುವಂತ ಅಭಿವೃದ್ಧಿ ಕೆಲಸಗಳನ್ನು ನಮ್ಮ ಶಾಸಕತ್ವದ ಅವಧಿಯಲ್ಲಿ ಮಾಡಿದರೂ ಕೂಡಾ ವಿರೋಧಿಗಳು ಭಾವಾನಾತ್ಮಕ ಸಂಗತಿಗಳನ್ನು ವೈಭವೀಕರಿಸಿ ನಮ್ಮನ್ನು ಸೋಲಿಸಿ ದ್ದಾರೆ. ಈ ಬಾರಿ ಹೀಗಾಗಬಾರದು. ಬಿಜೆಪಿಯ ಸುಳ್ಳು ಅಪಪ್ರಚಾರ ನಂಬದೇ ಪ್ರಮೋದ್ ಮಧ್ವರಾಜರ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ನಾಯಕ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಯಾದೀತು. ಈ ಚುನಾವಣೆ ನಿಷ್ಕೃಿಯತೆ ಮತ್ತು ಸಕ್ರೀಯತೆ, ಕೋಮುವಾದ ಮತ್ತು ಜಾತ್ಯಾತೀತತೆ, ಮನೆ ಸುಡುವ ಬೆಂಕಿ ಮತ್ತು ಮನೆ ಬೆಳಗುವ ಬೆಳಕು, ಹಾಗೂ ಸುಳ್ಳು ಮತ್ತು ಸತ್ಯದ ನಡುವಿನ ಹೋರಾಟವಾಗಿದೆ. ನಾವು ಎಚ್ಚರ ತಪ್ಪಿದರೆ ಈ ದೇಶದಲ್ಲಿ ಸರ್ವಾಧಿಕಾರ ನೆಲೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಉಡುಪಿ ಜಿಪಂ ವ್ಯಾಪ್ತಿಯ ಪಕ್ಷದ ವೀಕ್ಷಕಿ ಜ್ಯೋತಿ ಹೆಬ್ಬಾರ್ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕಾಪು ಬ್ಲಾಕ್ ಉತ್ತರ ವಲಯದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ ವಹಿಸಿದ್ದರು.

ವೇದಿಕೆಯಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗಿರೀಶ್ ಕುಮಾರ್, ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಮೀನುಗಾರ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಕಿರಣ ಕುಮಾರ್, ಕಾಪು ಬ್ಲಾಕ್ ಉತ್ತರ ವಲಯ ಉಪಾಧ್ಯಕ್ಷ ಲೋರೆನ್ಸ್ ಡೇಸಾ, ಪ್ರಧಾನ ಕಾರ್ಯದರ್ಶಿ ದಿವಾಕರ ಬೊಳ್ಜೆ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಟೀವನ್ ಕುಲಾಸೊ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಹೆಲೆನ್ ಫೆರ್ನಾಂಡಿಸ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ ಕಲಾಯಿ, ಎಸ್‌ಸಿ ಘಟಕದ ಅಧ್ಯಕ್ಷ ಗಿರೀಶ್ ಗುಡ್ಡೆಅಂಗಡಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಇರ್ಫಾನ್ ಸಂಪಿಗೆನಗರ, ಗ್ರಾಮೀಣ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರ ಶೇಖರ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

ಕಾಪು ಬ್ಲಾಕ್ ಉತ್ತರ ವಲಯ ಸಮಿತಿ ಕಾರ್ಯದರ್ಶಿ ಆಬಿದ್ ಆಲಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News