ಮರ್ಯಾದಾ ಹತ್ಯೆ: ಬಾಲಕಿಯನ್ನು ಉಸಿರುಗಟ್ಟಿಸಿ ಕೊಂದ ತಂದೆ

Update: 2019-03-31 17:38 GMT

ಅಹ್ಮದ್‌ನಗರ(ಮಹಾರಾಷ್ಟ್ರ),ಮಾ.31: ಕಾಲೇಜಿನಲ್ಲಿಯ ಸಹವಿದ್ಯಾರ್ಥಿಯೊಂದಿಗೆ ತನ್ನ 17ರ ಹರೆಯದ ಪುತ್ರಿಯ ಸ್ನೇಹವನ್ನು ವಿರೋಧಿಸಿದ್ದ ವ್ಯಕ್ತಿ ಆಕೆಯನ್ನು ಉಸಿರುಗಟ್ಟಿಸಿ ಕೊಂದ ಘಟನೆ ಅಹ್ಮದ್‌ನಗರ ಜಿಲ್ಲೆಯ ಚೊಂಡಿ ಗ್ರಾಮದದಲ್ಲಿ ನಡೆದಿದೆ.

ಇದು ಮರ್ಯಾದಾ ಹತ್ಯೆಯಾಗಿದೆ ಎಂದು ತಾವು ಶಂಕಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಚೊಂಡಿ ಗ್ರಾಮದ ನಿವಾಸಿ ಪಾಂಡುರಂಗ ಶ್ರೀರಂಗ ಸಾಯಗುಂಡೆ(51)ಎಂಬಾತನ ಮಗಳು ತನ್ನ ಗೆಳೆಯನೊಂದಿಗೆ ಪದೇ ಪದೇ ಚಾಟ್‌ನಲ್ಲಿ ತೊಡಗಿರುತ್ತಿದ್ದಳು ಮತ್ತು ಆತನ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳುತ್ತಿದ್ದಳು. ಯುವಕನೊಂದಿಗೆ ಗೆಳೆತನವನ್ನು ಮುಂದುವರಿಸದಂತೆ ಸಾಯಗುಂಡೆ ಮಗಳಿಗೆ ಹಲವಾರು ಬಾರಿ ಸೂಚಿಸಿದ್ದ,ಆದರೆ ಆಕೆ ಅದಕ್ಕೆ ಕಿವಿಗೊಟ್ಟಿರಲಿಲ್ಲ ಎಂದು ಪೊಲೀಸರು ತಿಳಿಸಿದರು.

ಮಾ.23ರಂದು ಇದೇ ವಿಷಯದಲ್ಲಿ ಮಗಳೊಂದಿಗೆ ಜಗಳವಾಡಿದ್ದ ಸಾಯಗುಂಡೆ ಸಿಟ್ಟಿನ ಭರದಲ್ಲಿ ಆಕೆಯನ್ನು ಉಸಿರುಗಟ್ಟಿಸಿ ಕೊಂದುಹಾಕಿದ್ದ. ಬಾಲಕಿಯ ಸೋದರ ಮಾವಂದಿರಾದ ರಾಜೇಂದ್ರ ಶಿಂದೆ ಮತ್ತು ಜ್ಞಾನದೇವ ಶಿಂದೆ ಅವರೊಂದಿಗೆ ಸೇರಿಕೊಂಡು ಶವವನ್ನು ಸುಟ್ಟುಹಾಕಲು ಪ್ರಯತ್ನಿಸಿದ್ದ ಆತ ಬಳಿಕ ತನ್ನ ಮಗಳು ನಾಪತ್ತೆಯಾಗಿದ್ದಾಳೆಂದು ಪೊಲೀಸ್ ದೂರು ನೀಡಿದ್ದ.

ಮಾ.25ರಂದು ಬಾಲಕಿಯ ಅರೆಸುಟ್ಟ ಶವ ಮನೆಯ ಸಮೀಪದ ಕೆರೆಯ ಬಳಿ ಪತ್ತೆಯಾಗಿತ್ತು.

ಸುಮಾರು 35 ಜನರನ್ನು ವಿಚಾರಣೆಗೊಳಪಡಿಸಿದ್ದ ಪೊಲೀಸರು ಲಭ್ಯ ಮಾಹಿತಿಗಳು ಮತ್ತು ಸುಳಿವುಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News