×
Ad

ಬಿಜೆಪಿ ಚುನಾವಣಾ ಕಚೇರಿ ಬಳಿ ಪ್ರಧಾನಿ ಕಾರ್ಯಕ್ರಮದ ನೇರ ವೀಕ್ಷಣೆ

Update: 2019-03-31 23:25 IST

ಮಂಗಳೂರು, ಮಾ.31: ನಗರದ ಬಿಜೆಪಿ ಕಚೇರಿಯ ಆವರಣದಲ್ಲಿಂದು ‘ನಾನು ಚೌಕಿದಾರ’ ಕಾರ್ಯಕ್ರಮಕ್ಕೆ ಮಂಗಳೂರು ಲೋಕ ಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಸಂಚಾಲಕರಾದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಚಾಲನೆ ನೀಡಿದರು.

ಇಂದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಟಕೋತಾರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ನಾನು ಚೌಕಿದಾರ ಸಂವಾದ ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ನಗರದಲ್ಲಿಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೇಶದ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿಗಾಗಿ ಬೂತ್ ಮಟ್ಟದಿಂದಲೂ ಚೌಕಿದಾರರಾಗಿ ನಾವು ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು. ಕೇಸರಿ ಹಾಗೂ ಗುಲಾಬಿ ಬಣ್ಣದ ಪೇಟ ಧರಿಸಿದ್ದ ಪುರುಷರು ಮತ್ತು ಮಹಿಳೆಯರ ನಾನು ಚೌಕಿದಾರ ಎನ್ನುವ ಹೆಸರಿನ ಬಟ್ಟೆಯನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇಶದ ವಿವಿಧ ಕಡೆಗಳಲ್ಲಿ ಮೋದಿಯನ್ನು ಬೆಂಬಲಿಸುವ ಚೌಕಿದಾರರನ್ನುದ್ದೇಶಿಸಿ ಮೋದಿ ವೀಡಿಯೋ ಕಾನ್ಫರನ್ಸ್ ಮೂಲಕ ನಿಗದಿತ ಕೇಂದ್ರಗಳ ಕಾರ್ಯಕರ್ತರ ಜೊತೆ ಸಂವಾದ ನಡೆಸಿದರು.

ಚೌಕಿದಾರರಾಗಲು ಮೋದಿ ಕರೆ :- ನಗರದಲ್ಲಿ ವೀಡಿಯೋ ಕಾನ್ಫರೆನ್ಸ್ ನಲ್ಲಿ ನೇರವಾಗಿ ಭಾಗವಹಿಸಲು ಅವಕಾಶ ವಿರಲಿಲ್ಲ. ರಾಜ್ಯದ ಬೆಂಗಳೂರಿನ ಚೌಕಿದಾರ್ ಪ್ರತಿನಿಧಿಗಳು ಪ್ರಧಾನಿ ಜೊತೆ ಸಂವಾದ ನಡೆಸಿದರು. ದೇಶದ ಎಲ್ಲಾ ಪ್ರಜೆಗಳು ದೇಶ ರಕ್ಷಣೆಗಾಗಿ ಅಭಿವೃದ್ಧಿಗಾಗಿ ಚೌಕಿದಾರರಾಗಬೇಕು ಎಂದು ಮೋದಿ ಕರೆ ನೀಡಿದರು.

ಜನರು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎನ್ನುವುದು ಚೌಕಿದಾರ್ ಆಂದೋಲನದ ಗುರಿಯಾಗಿದೆ ಇದು ಚುನಾವಣೆಗೆ ಸೀಮಿತವಾದ ಘೋಷಣೆಯಲ್ಲ ಎಂದು ಮೋದಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಯೋಗೀಶ್ ಭಟ್, ಬಿಜೆಪಿ ಮುಖಂಡರಾದ ಪ್ರತಾಪ ಸಿಂಹ ನಾಯಕ್, ಸುದರ್ಶನ ಮೂಡಬಿದಿರೆ, ಗೋಪಾಲಕೃಷ್ಣ ಹೇರಳೆ, ಬ್ರಿಜೇಶ್ ಚೌಟ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News