×
Ad

ಮತದಾನದ ವೇಳೆ ಮತದಾರರ ವಿಶ್ವಾಸ ಹೆಚ್ಚಿಸುವ ವಿವಿಪ್ಯಾಟ್

Update: 2019-04-02 19:27 IST

ಉಡುಪಿ, ಎ.2: ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವೇ ಮತದಾನ. ಯಾವುದೇ ಧರ್ಮ, ಅಂತಸ್ತು, ಲಿಂಗಬೇಧವಿಲ್ಲದೇ ಪ್ರತಿಯೊಬ್ಬ ನಾಗರಿಕನೂ ಸಮಾನವಾಗಿ ಪಡೆದಿರುವ ಮತದಾನದ ಹಕ್ಕು, ತಮ್ಮ ಆಯ್ಕೆಯ ಯೋಗ್ಯ ಪ್ರತಿನಿಧಿಯನ್ನು ಆರಿಸಲು ದೊರೆತಿರುವ ಅವಕಾಶ ಮತ್ತು ಮುಕ್ತ ಸ್ವಾತಂತ್ರ.

ಈ ಮತದಾನ ಪ್ರಕ್ರಿಯೆಯಲ್ಲಿ ಮತದಾರ ತನ್ನ ಆಯ್ಕೆಯ ಅಭ್ಯರ್ಥಿಗೆ ಗೌಪ್ಯವಾಗಿ ಚಲಾಯಿಸುವ ಮತ, ತಾನು ಆಯ್ಕೆ ಮಾಡಿದ ವ್ಯಕ್ತಿಗೇ ದೊರೆತಿದೆ ಎಂಬುದನ್ನು ಖಾತರಿ ಪಡಿಸಲು ಚುನಾವಣಾ ಆಯೋಗ ಒದಗಿಸಿರುವ ವಿವಿ ಪ್ಯಾಟ್‌ಯಂತ್ರ (Voter Verifiable Paper Audit Trail-VVPAT) ಇದು ಮತದಾನದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಮೂಡಿಸುತ್ತದೆ.

ಹಿಂದೆ ಮತದಾನ ಸಂದರ್ದಲ್ಲಿ ಮತಪತ್ರಗಳನ್ನು ಬಳಸಲಾಗುತ್ತಿತ್ತು. ಇದರಿಂದ ಚುನಾವಣಾ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿತ್ತು. ಇದನ್ನು ಸರಿಪಡಿಸುವ ಉದ್ದೇಶದಿಂದ ಚುನಾವಣಾ ಆಯೋಗ ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆಯನ್ನು ಜಾರಿಗೆ ತಂದಿತು. ಇದರಿಂದ ಶೀಘ್ರದಲ್ಲಿ ಮತದಾನ ಮುಗಿದು, ಅತ್ಯಂತ ನಿಖರವಾಗಿ ಹಾಗೂ ತ್ವರಿತಗತಿಯಲ್ಲಿ ಅ್ಯರ್ಥಿ ಯ ಆಯ್ಕೆ ಘೋಷಣೆ ನಡೆಯಲು ಸಾದ್ಯವಾಗುವಂತಾಗಿದೆ.

ಆದರೆ ಎಲೆಕ್ಟ್ರಾನಿಕ್ ಮತಯಂತ್ರಗಳ ಕುರಿತಂತೆ ನಡೆದಿರುವ ಅಪಪ್ರಚಾರ ಹಾಗೂ ಕೇಳಿಬರುತ್ತಿರುವ ಆರೋಪಗಳಿಂದ ಸಾಮಾನ್ಯ ಮತದಾರ ಗೊಂದಲ ಕ್ಕೊಳಗಾಗುವಂತಾಗಿದೆ. ಇಂಥ ಸಂದರ್ಭದಲ್ಲಿ, ಮತದಾರರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಮತಯಂತ್ರ(ಇವಿಎಂ)ಗಳಿಗೆ ವಿವಿ ಪ್ಯಾಟ್ ಯಂತ್ರಗಳನ್ನು ಚುನಾವಣಾ ಆಯೋಗ ಅಳವಡಿಸಲು ಪ್ರಾರಂಭಿಸಿದೆ.

ಏನಿದು ವಿವಿ ಪ್ಯಾಟ್: ವೋಟರ್ ವೆರಿಫಯೇಬಲ್ ಪೇಪರ್ ಆಡಿಟ್ ಟ್ರಯಲ್ (VVPAT)  ಹೆಸರೇ ಸೂಚಿಸುವಂತೆ, ಮತದಾರ ತಾನು ಹಾಕಿದ ಅಮೂಲ್ಯ ಮತ ತನ್ನ ಆಯ್ಕೆಯ ಅಭ್ಯರ್ಥಿಗೆ ಬಿದ್ದಿದೆ ಎಂಬುದನ್ನು ಮತದಾರ ನಿಗೆ ಆ ಕ್ಷಣದಲ್ಲಿ ತೋರಿಸುವ ಪೇಪರ್ ಮುದ್ರಿತ ಯಂತ್ರ ಇದು.

ಮತಗಟ್ಟೆಯಲ್ಲಿ ಮತ ಚಲಾಯಿಸುವ ಎಲೆಕ್ಟ್ರಾನಿಕ್ ಮತಯಂತ್ರದ ಪಕ್ಕದಲ್ಲಿ ಮತ್ತೊಂದು ಯಂತ್ರ ಇರುತ್ತದೆ. ಮತಯಂತ್ರದಲ್ಲಿ ನೀವು ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಿದಾಗ, ವಿವಿಪ್ಯಾಟ್ ಯಂತ್ರದಲ್ಲಿ ನೀವು ಚಲಾಯಿಸದ ಮತ, ನೀವು ಮತಯಂತ್ರದಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಗೆ  ಚಲಾವಣೆಯಾಗಿರುವ ಕುರಿತ, ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆಯನ್ನು ಒಳಗೊಂಡು ಚೀಟಿಯ ಮುದ್ರಿತ ವಿವರಗಳನ್ನು 7 ಸೆಕೆಂಡ್‌ಗಳ ಕಾಲ ವೀಕ್ಷಿಸಲು ವಿವಿಪ್ಯಾಟ್‌ನಿಂದ ಸಾದ್ಯವಾಗುತ್ತದೆ.

ಅನಂತರ ಆ ಎಲ್ಲಾ ವಿವರದ ಚೀಟಿ, ವಿವಿಪ್ಯಾಟ್ ಯಂತ್ರದಲ್ಲಿ ಅಳವಡಿಸಿ ರುವ ಪೆಟ್ಟಿಗೆಯಲ್ಲಿ ಮುದ್ರಿತವಾಗಿ ಬೀಳುತ್ತದೆ. ಈ ಮುದ್ರಿತ ಪ್ರತಿಯನ್ನು ಯಾರಿಗೂ ನೀಡುವುದಿಲ್ಲ. ವಿವಿ ಪ್ಯಾಟ್‌ನಲ್ಲಿ ಸೀಲ್ ಮಾಡಿದ ಬಾಕ್ಸ್‌ನಲ್ಲಿ ಈ ಪ್ರತಿ ಇರಲಿದೆ. ಇದರಿಂದ ಯಾವುದೇ ಗೊಂದಲ, ಅನುಮಾನಗಳಿಗೆ ಅವಕಾಶವಿಲ್ಲದಂತೆ, ತನ್ನ ಅಮೂಲ್ಯ ಮತ ತನ್ನ ಆಯ್ಕೆಯ ಅ್ಯರ್ಥಿಗೆ ಚಲಾವಣೆಯಾಗಿದೆ ಎಂಬುದನ್ನು ಸ್ವತಹ ಮತದಾರರೇ ಖಾತ್ರಿ ಪಡಿಸಿಕೊಳ್ಳ ಬಹುದಾಗಿದೆ.

ಈ ವಿವಿ ಪ್ಯಾಟ್‌ಯಂತ್ರಗಳನ್ನು ಭಾರತ ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ಸರಕಾರಿ ಸ್ವಾಮ್ಯದ ಬಿಇಎಲ್ ಕಂಪೆನಿ ಅಭಿವೃದ್ದಿಪಡಿಸಿದೆ. ಚುನಾವಣಾ ಸಮಯದಲ್ಲಿ ಸಾರ್ವಜನಿಕರಲ್ಲಿ ಮತದಾನ ಪ್ರಕ್ರಿಯೆ ಕುರಿತು ಇನ್ನಿಲ್ಲದ ಗೊಂದಲ ಮೂಡಿಸುವ ಕಿಡಿಗೇಡಿಗಳಿಗೆ ಈಗ ಶಿಕ್ಷೆಯೂ ಆಗಲಿದೆ. ಏಕೆಂದರೆ ವಿವಿಪ್ಯಾಟ್ ಯಂತ್ರದ ವಿರುದ್ದ ತಪ್ಪು ಆರೋಪಗಳನ್ನು ಮಾಡುವ ಕಿಡಿಗೇಡಿಗಳಿಗೆ ಕಾರಾಗೃಹವಾಸದ ಶಿಕ್ಷೆಯೂ ಆಗುವ ಸಾಧ್ಯತೆ ಇದೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸಹ ಈ ವಿವಿ ಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ಯಂತ್ರದ ಕಾರ್ಯ ವೈಖರಿ ಕುರಿತಂತೆ ಪ್ರತಿಯೊಬ್ಬ ಸಾರ್ವಜನಿಕರಿಗೂ (ಮತದಾರ) ಜಿಲ್ಲಾ ಸ್ವೀಪ್ ಸಮಿತಿಗಳ ವತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಮತದಾರರಿಗೆ ತಮ್ಮ ಮತ ಚಲಾವಣೆಯ ಬಗ್ಗೆ ಖಾತ್ರಿ ಮೂಡಿಸಲಾಗುತ್ತಿದೆ.

ಆದ್ದರಿಂದ ಜಿಲ್ಲೆಯಲ್ಲಿ ಎ.18 ಮತ್ತು 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಅನುಮಾನ, ಗೊಂದಲಗಳಿಗೆ ಒಳಗಾಗದೇ,ವಿವೇಚನೆ ಬಳಸಿ ನಿಮ್ಮ ಆಯ್ಕೆಯ ಅ್ಯರ್ಥಿಗೆ ಮತ ಚಲಾಯಿಸಿ. ನಿಮ್ಮ ಮತ ಸರಿಯಾದ ವ್ಯಕ್ತಿಗೆ ಹಾಕಿರುವ ಕುರಿತು ವಿವಿ ಪ್ಯಾಟ್‌ನಿಂದ ಖಾತರಿಪಡಿಸಿಕೊಳ್ಳಿ ಎಂದು ಜಿಲ್ಲಾ ಸ್ವೀಪ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಎಲ್ಲಾ 1111 ಮತಗಟ್ಟೆಗಳ ವ್ಯಾಪ್ತಿಯ ಒಂದು ಲಕ್ಷಕ್ಕೂ ಅಧಿಕ ಮತದಾರರಿಗೆ ವಿವಿಪ್ಯಾಟ್ ಕುರಿತು ಅರಿವು ಮೂಡಿಸ ಲಾಗಿದೆ. ಚುನಾವಣೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂಬ ಉದ್ದೇಶದಿಂದ, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ಮೂಲನಿವಾಸಿಗಳು, ಮಹಿಳೆ ಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಮತದಾರರಿಗೆ ವಿವಿ ಪ್ಯಾಟ್‌ನ ಪ್ರಾತ್ಯಕ್ಷಿಕೆ ನೀಡಲಾಗಿದೆ. ಜಿಲ್ಲಾ ಸ್ವೀಪ್ ವತಿಯಿಂದ ಜಿಲ್ಲೆಯಾದ್ಯಂತ ವಿವಿಧ ಇಲಾಖೆಗಳ ವತಿಯಿಂದ ಪ್ರತಿದಿನ ನಡೆಯುತ್ತಿರುವ ಸ್ವೀಪ್ ಕಾರ್ಯಕ್ರಮಗಳಲ್ಲಿ ಸಹ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.

- ಸಿಂಧೂ ಬಿ.ರೂಪೇಶ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News