ಮಂಗಳೂರು -ಕಾರ್ಕಳ ಹೈವೇ ಅಭಿವೃದ್ಧಿಗೆ ಅಡ್ಡಿಯಾದ 'ಹಸ್ತ'ಕ್ಷೇಪ: ನಳಿನ್ ಆರೋಪ

Update: 2019-04-03 16:00 GMT

ಮೂಡುಬಿದಿರೆ: ಮಂಗಳೂರು - ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ವಿಳಂಬಕ್ಕೆ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕರಾಗಿದ್ದ ಅಭಯಚಂದ್ರ ಜೈನ್ ಮತ್ತು ಜೆ.ಆರ್ ಲೋಬೋ ಅವರೇ ಕಾರಣ. ಚತುಷ್ಪಥ ಹೆದ್ದಾರಿಯನ್ನು ದ್ವಿಪಥ ಹೆದ್ದಾರಿಯನ್ನಾಗಿ ಮಾಡಬೇಕೆಂದು ಈ ಮೂವರೂ ಪಟ್ಟು ಹಿಡಿದಿದ್ದು ಇದಕ್ಕೆ ಸಂಬಂಧಿಸಿದ ಮಹತ್ವದ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯ ಮೇಲೆ  ಹಲ್ಲೆಗೂ ಮುಂದಾಗಿದ್ದರು ಎಂದು ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. 

ಬುಧವಾರ ಮೂಡುಬಿದಿರೆ ತಾಲೂಕಿನಲ್ಲಿ ಹಲವೆಡೆ ಭೇಟಿ ನೀಡಿ ಮತಯಾಚನೆಯ ಕಾರ್ಯಕ್ರಮದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದಕ್ಕೆ ಸಂಬಂಧಿಸಿದ ಸ್ಪಷ್ಟ ದಾಖಲೆಗಳು ತಮ್ಮಲ್ಲಿದ್ದು ಬಹಿರಂಗ ಚರ್ಚೆಗೆ ಬರಲಿ. ಚತುಷ್ಪಥ ರಸ್ತೆಗೆ ತಮಗೆ ಸಂಬಂಧಿಸಿದವರ ಜಾಗ ಸ್ವಾಧೀನವಾಗುತ್ತದೆ ಎಂಬ ಏಕೈಕ ಕಾರಣಕ್ಕೆ ಅಡ್ಡಿಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ಯೋಜನೆಗೆ ರಾಜ್ಯ ಸರ್ಕಾರ ಭೂಸ್ವಾಧೀನಪಡಿಸಿಕೊಡಬೇಕು. ಅದಕ್ಕೂ ಈ ಮೂವರು ತಡೆಯೊಡ್ಡಿದ ಪರಿಣಾಮ ವಿಳಂಬವಾಗಿದೆ. ಈಗಿನ ರಾಜ್ಯ ಸರ್ಕಾರವು ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದು ಮುಂದಿನ ಸೆಪ್ಟೆಂಬರ್ ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಗುರುಪುರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸೇತುವೆಗೆ ಪರ್ಯಾಯಾವಾಗಿ ಹೊಸ ಸೇತುವೆ ನಿರ್ಮಾಣವಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. 

ಕಳೆದ ಐದು ವರ್ಷಗಳಲ್ಲಿ 16 ಸಾವಿರ ಕೋಟಿಗೂ ಅಧಿಕ ಮೊತ್ತದ ಅನುದಾನಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಮುಲ್ಕಿ-ಕಟೀಲು-ಪೊಳಲಿ-ಬಿ.ಸಿ.ರೋಡ್ ಸಂಪರ್ಕ ರಸ್ತೆ ಮೆಲ್ಕಾರು-ಮುಡಿಪು-ಕೊಣಾಜೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ್ದು ಇದಕ್ಕಾಗಿ 2500 ಕೋಟಿ, ಬಿ.ಸಿ.ರೋಡ್‍ನಿಂದ ಅಡ್ಡಹೊಳೆವರೆಗೆ ಷಟ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಿದ್ದು 825 ಕೋಟಿ, ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ 1163 ಕೋಟಿ, ಬಿ.ಸಿ.ರೋಡ್-ಪಡೀಲ್-ಮರೋಳಿರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು 860 ಕೋಟಿ, ಫಲ್ಗುಣಿ ನದಿಗೆ ಅಡ್ಡಲಾಗಿ ಕೂಳೂರಿನಲ್ಲಿ  ಷಟ್ಪಥ ರಸ್ತೆ ಸೇತುವೆ ನಿರ್ಮಾಣಕ್ಕೆ 65 ಕೋಟಿ ರೂ ಮೀಸಲಿರಿಸಿದ್ದು ಈ ಎಲ್ಲಾ ಕಾಮಗಾರಿಗಳು ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣಗೊಳ್ಳಲಿದೆ.

ರೈಲು ನಿಲ್ದಾಣ ಮತ್ತು ಮಾರ್ಗಗಳ ಅಭಿವೃದ್ಧಿಗೆ 1243 ಕೋಟಿ, ದ.ಕ ಜಿಲ್ಲಾ ಪಂಚಾಯತ್‍ಗೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 846 ಕೋಟಿ, ಶಿಕ್ಷಣ ಇಲಾಖೆಗೆ 161 ಕೋಟಿ, ನವ ಮಂಗಳೂರು ಬಂದರು ಅಭಿವೃದ್ಧಿ ಮತ್ತು ಮೀನುಗಾರಿಕಾ ಜೆಟ್ಟಿಗಾಗಿ 211 ಕೋಟಿ ರೂ, ಗ್ರಾಮೀಣ ಮತ್ತು ನಗರ ನೀರು ಸರಬರಾಜು ಯೋಜನೆಗೆ 125 ಕೋಟಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 64 ಕೋಟಿ, ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಗೆ 370 ಕೋಟಿ, ಸಹಿತ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಬಳ್ಪ ಗ್ರಾಮಕ್ಕೆ 10 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಸುಮಾರು 10ಸಾವಿರ ಜನರಿಗೆ ಉದ್ಯೋಗ ಒದಗಿಸುವ ಒಂದು ಸಾವಿರ ಕೋಟಿ ರೂ ವೆಚ್ಚದ ಪ್ಲಾಸ್ಟಿಕ್ ಪಾರ್ಕ್, ಸಾವಿರಾರು ಜನರಿಗೆ ಉದ್ಯೋಗ ನೀಡುವ ಕೋಸ್ಟಲ್‍ಗಾರ್ಡ್ ಟ್ರೈನಿಂಗ್ ಸೆಂಟರ್, 3 ಸಾವಿರ ಜನರಿಗೆ ಉದ್ಯೋಗ ಒದಗಿಸುವ ಕುದುರೆಮುಖ ಪೈಪ್ ಫ್ಯಾಕ್ಟರಿ, ಸುರತ್ಕಲ್‍ನಲ್ಲಿ ಕೇಂದ್ರೀಯ ವಿದ್ಯಾಲಯ, ಮಂಗಳೂರಿನಲ್ಲಿ ಮೆಡಿಕಲ್ ಟೂರಿಸಂ ಸಹಿತ ಹತ್ತಾರು ಯೋಜನೆಗಳು ಮಂಜೂರಾತಿ ಪಡೆದಿದೆ. ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೇ ವಿಭಾಗ ಹಾಗೂ ಸ್ಪೆಷಲ್ ಎಗ್ರಿಕಲ್ಚರಲ್ ಜೋನ್ ಪ್ರಸ್ತಾವನೆಯ ಹಂತದಲ್ಲಿದೆ ಎಂದು ಅವರು ವಿವರಿಸಿದರು. 

ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ ಕಟೀಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಡಲ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News