ಕುಂದಾಪುರ: ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ
Update: 2019-04-08 15:37 GMT
ಕುಂದಾಪುರ, ಎ.8: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಕುಂದಾಪುರ ಪೊಲೀಸ್ ಉಪವಿಭಾಗದ ವ್ಯಾಪ್ತಿ ಯಲ್ಲಿ ಇಂದು ಪೊಲೀಸ್ ಪಥ ಸಂಚಲನವನ್ನು ಆಯೋಜಿಸಲಾಗಿತ್ತು.
ಮತದಾರರು ಯಾವುದೇ ಭಯ ಭೀತಿ ಇಲ್ಲದೆ ನಿರ್ಭೀತಿಯಿಂದ ಮತ ದಾನ ಮಾಡುವ ಕುರಿತು ಸಂದೇಶ ಸಾರುವ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶಗಳಾದ ಗಂಗೊಳ್ಳಿ, ಕಂಡ್ಲೂರು, ಕುಂದಾಪುರ ಕೋಡಿ ಪ್ರದೇಶದಲ್ಲಿ ಸುಮಾರು 150 ಮಂದಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಸಿವಿಲ್ ಪೊಲೀಸರು ಪಥ ಸಂಚಲನ ನಡೆಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಕುಂದಾಪುರ ಹಾಗೂ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ವಿವಿಧ ಪೊಲೀಸ್ ಠಾಣೆಗಳ ಏಳು ಮಂದಿ ಪೊಲೀಸ್ ಉಪನಿರೀಕ್ಷಕರು ಹಾಜರಿದ್ದರು. ಕಂಡ್ಲೂರಿನ ಪಥ ಸಂಚಲನದ ವೇಳೆ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಎಸ್.ಎಸ್.ಮಧುಕೇಶ್ವರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್ ಉಪಸ್ಥಿತರಿದ್ದರು.