ಸಂಘಟನೆ ಹೆಸರಿನಲ್ಲಿ ವಸೂಲಿ: ನಾಲ್ವರ ಬಂಧನ
ಕೋಟ, ಎ.9: ಅಖಿಲ ಕರ್ನಾಟಕ ನೆಲ, ಜಲ, ಪರಿಸರ ಸಂರಕ್ಷಣಾ ವೇದಿಕೆ ಹೆಸರಿನಲ್ಲಿ ಎ.8ರಂದು ಶಿರಿಯಾರ ಗ್ರಾಮದ ಶಿರಣಿ ಎಂಬಲ್ಲಿ ಕಲ್ಲು ಸಾಗಾಟ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತ ರಾದ ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಲತಾ ಶೆಟ್ಟಿ ಸೇರಿದಂತೆ ನಾಲ್ವರಿಗೆ ಕುಂದಾಪುರ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಲತಾ ಶೆಟ್ಟಿ (48), ಆಕೆಯ ಪತಿ ಉದಯ ಕುಮಾರ್ ಶೆಟ್ಟಿ (49), ಜಿಲ್ಲಾಧ್ಯಕ್ಷ ನಿತ್ಯಾನಂದ ಶೆಟ್ಟಿ(53), ಗುರುಪ್ರಸಾದ್ ಶೆಟ್ಟಿ(49) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಗರಿಕೆಮಠದ ಕ್ವಾರೆಯಿಂದ ಶಿಲೆಕಲ್ಲನ್ನು ಸಾಗಿಸುತ್ತಿದ್ದ ಉಪೇಂದ್ರ ನಾಯ್ಕಿ ಎಂಬವರ ವಾಹನವನ್ನು ತಡೆದು ನಿಲ್ಲಿಸಿ ದಾಖಲೆಗಳನ್ನು ಕೇಳಿದ್ದರು.
ಇದನ್ನು ನಿರಾಕರಿಸಿದಾಗ ಆರೋಪಿಗಳು, ನಿಮ್ಮ ವಾಹನವನ್ನು ಸೀಜ್ ಮಾಡಿ ಗಣಿ ಇಲಾಖೆಗೆ ಒಪ್ಪಿಸಿ ಕೇಸು ದಾಖಲು ಮಾಡುವುದಾಗಿ ಬೆದರಿಸಿ ದ್ದರು. ಈ ವೇಳೆ ಆರೋಪಿಗಳು ಉಪೇಂದ್ರ ನಾಯ್ಕಿ ಬಳಿ ಇದ್ದ 2ಸಾವಿರ ರೂ. ವಸೂಲಿ ಮಾಡಿದ್ದಾರೆಂದು ದೂರಲಾಗಿದೆ.
ಇದೇ ಸಂದರ್ಭದಲ್ಲಿ ಬಂದ ಅಮೃತ ಪೂಜಾರಿ ಎಂಬುವವರ 407 ಟೆಂಪೋ ವನ್ನು ನಿಲ್ಲಿಸಿ ಅವರಿಂದ 1,500ರೂ. ವಸೂಲಿ ಮಾಡಿದ್ದರು. ಈ ಬಗ್ಗೆ ಉಪೇಂದ್ರ ನಾಯ್ಕ್ ನೀಡಿದ ದೂರಿನಂತೆ ಕೋಟ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.