ಮರಳು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಬದ್ಧ: ಪ್ರಮೋದ್ ಮಧ್ವರಾಜ್

Update: 2019-04-12 10:08 GMT

ಕುಂದಾಪುರ, ಎ.12: ಕರಾವಳಿ ಜಿಲ್ಲೆಗಳಲ್ಲಿನ ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸಿಆರ್‌ಝಡ್ ಪ್ರದೇಶದಲ್ಲಿ ಈಗಿರುವ ಮರಳು ದಿಬ್ಬ ತೆರವು ಬದಲು ಮರಳು ಸಂಗ್ರಹ ತೆರವು ಕಾನೂನನ್ನು ಮತ್ತು ನಾನ್ ಸಿಆರ್‌ಝಡ್ ನದಿಗಳಲ್ಲಿ ನೀರಿನ ಒಳಗೆ ಮರಳು ತೆಗೆಯುವ ಅವಕಾಶದ ಕಾನೂನನ್ನು ಜಾರಿಗೊಳಿಸಲು ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಕುಂದಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತ ನಾಡುತಿದ್ದರು. ಹಾರಾಡಿಯ ಕುಕ್ಕುಡೆ ಗ್ರಾಮಸ್ಥರ ಪರವಾಗಿ ಕೆಲವು ಗ್ರಾಮಸ್ಥರು ಅಕ್ರಮ ಮರಳುಗಾರಿಕೆ ವಿರುದ್ಧ ಹಸಿರು ಪೀಠ ನ್ಯಾಯಾಧಿಕರಣಕ್ಕೆ ದೂರು ಸಲ್ಲಿಸಿರುವುದರಿಂದ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಹಸಿರು ನ್ಯಾಯಪೀಠ ತಡೆಯಾಜ್ಞೆ ನೀಡಿತ್ತು. ಹಲವು ತಿಂಗಳುಗಳ ಕಾಲ ಮರಳು ಸಿಗದೆ ಕಟ್ಟಡ ಕಾರ್ಮಿಕರಿಗೆ ಹಾಗೂ ಜನರಿಗೆ ತುಂಬಾ ತೊಂದರೆ ಆಗಿತ್ತು. ಅದನ್ನು ಮನಗಂಡು ನಾನು ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಅವಿರತ ಶ್ರಮಪಟ್ಟಿದ್ದೇನೆ ಎಂದರು.

ಅದರ ಫಲಶ್ರುತಿಯಾಗಿ 2017-18ರಲ್ಲಿ 27 ಮರಳು ದಿಬ್ಬಗಳನ್ನು ಗುರುತಿಸಿ 9 ಲಕ್ಷ ಟನ್ ಮರಳು ತೆರವುಗೊಳಿಸುವ ಕಾರ್ಯ ಪ್ರಾರಂಭಗೊಂಡು 165 ಪರವಾನಿಗೆದಾರರನ್ನು ನೊಂದಾಯಿಸಿ ಸುಮಾರು 6 ಲಕ್ಷ ಟನ್ ಮರಳು ತೆರವುಗೊಳಿಸಲಾಗಿದೆ. ಅಲ್ಲದೆ ಜಿಲ್ಲೆಯ ಮರಳು ಉಡುಪಿಯ ಜನತೆಗೆ ಸಿಗಬೇಕೆಂಬ ನನ್ನ ನಿರ್ಧಾರ ಅಚಲವಾಗಿತ್ತು ಎಂದು ಅವರು ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಘುಪತಿ ಭಟ್ ನಾನು ಶಾಸಕನಾದರೆ ಒಂದು ತಿಂಗಳ ಒಳಗೆ ಮರಳು ಮನೆ ಬಾಗಿಲಿಗೆ ತಂದು ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಇಂದು 11 ತಿಂಗಳಾದರು ಕೂಡಾ ಮರಳು ಜನರಿಗೆ ಲಭ್ಯವಾಗಿಸುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಈ ವರ್ಷ ಕೇವಲ 7 ಮರಳು ದಿಬ್ಬಗಳನ್ನು ಗುರುತಿಸಿ ಕೇವಲ 45 ಪರವಾನಿಗೆ ದಾರರನ್ನು ನೋಂದಾಯಿಸಿ, ಕೇವಲ 17,000 ಟನ್ ಮರಳು ಮಾತ್ರ ತೆರವು ಗೊಳಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ತಪ್ಪು ನೀತಿಯಿಂದ ಇಂದು ಉಡುಪಿ ಜಿಲ್ಲೆಯ ಜನತೆಗೆ ಮರಳು ಸಿಗಲು ತೊಂದರೆಯಾಗಿದೆ. ಕುಂದಾಪುರ ಪ್ರದೇಶವನ್ನು ಇತ್ತೀಚಿಗೆ ಪರಿಸರ ಸೂಕ್ಷ್ಮ ಪ್ರದೇಶವಾಗಿ ಕೇಂದ್ರ ಸರಕಾರದ ಪರಿಸರ ಖಾತೆ ಸಚಿವಾಲಯ ಘೋಷಿಸಿದ್ದರಿಂದ ಆ ಪ್ರದೇಶದಲ್ಲಿ ಮರಳುಗಾರಿಕೆಗೆ ತೊಡಕಾಗಿದೆ. ಈ ಘೋಷಣೆ ಜಾರಿಯಾಗದಂತೆ ತಡೆಯಲು ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.

ಜಿಲ್ಲೆಯ ಉದ್ಯಾವರದ ಕೆಲವು ಪ್ರದೇಶಗಳಲ್ಲಿ ಹಾಗೂ ಹೆಜಮಾಡಿ ಕೂಡಾ ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಿಸಲಾಗಿದೆ. ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಪ್ರಕ್ರಿಯೆ ಮುಗಿದ ತಕ್ಷಣ ಜಿಲ್ಲಾಧಿಕಾರಿ ನೇತೃತ್ವದ 7 ಜನ ಸದಸ್ಯರ ಸಭೆಯನ್ನು ಕರೆಸಿ ಜಿಲ್ಲೆಯಲ್ಲಿ ರಾಜ್ಯ ಸರಕಾರ ಗುರುತಿಸಿದ 7.38 ಲಕ್ಷ ಟನ್ ಮರಳನ್ನು ತೆರವುಗೊಳಿಸಲು ಪರವಾನಿಗೆದಾರರನ್ನು ನೇಮಿಸಿ ಜನರಿಗೆ ಲಭ್ಯವಾಗುವಂತೆ ಮಾಡುವಲ್ಲಿ ತಾನು ಶಕ್ತಿ ಮೀರಿ ಪ್ರುತ್ನಿಸುವುದಾಗಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News