ನರೇಂದ್ರ ಮೋದಿ ಸರ್ಕಾರದಲ್ಲಿ ಆರ್ಥಿಕ ಸುರಕ್ಷತೆ ಯಶಸ್ವಿ-ಸುರೇಶ್ ಪ್ರಭು
ಪುತ್ತೂರು: ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ಅಂತಾರಾಷ್ಟ್ರೀಯ ಸುರ್ಷಕತೆ ಮಾತ್ರವಲ್ಲ, ದೇಶದೊಳಗೆ ಆರ್ಥಿಕ ಸುರಕ್ಷತೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಹೇಳಿದರು.
ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಸಮಿತಿಯ ವತಿಯಿಂದ ಸೋಮವಾರ ಪುತ್ತೂರು ನಗರದಲ್ಲಿ ನಡೆದ ಪಾದಯಾತ್ರೆ ಹಾಗೂ ದರ್ಬೆಯಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನರೇಂದ್ರ ಮೋದಿಯವರು ದೇಶದ ವಿಕಾಸದ ಜತೆಗೆ ಎಲ್ಲರನ್ನೂ ಅಭಿವೃದ್ಧಿಯೆಡೆಗೆ ಕೊಂಡೊಯ್ಯವ ಕೆಲಸ ಮಾಡಿದ್ದಾರೆ. ಮಹಿಳೆಯರು, ಯುವಕರು, ಕೃಷಿಕರು, ಮೀನುಗಾರರು ಎಲ್ಲರ ಅಭಿವೃದ್ಧಿ ಚಿಂತನೆಯ ಯೋಜನೆಗಳನ್ನು ಜಾರಿಗೊಳಿ ಸಿದ್ದಾರೆ ಎಂದರು.
ಜಿಲ್ಲಾ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮಾತನಾಡಿ ಪ್ರಧಾನಿ ಮೋದಿಯವರು ಸಮರ್ಥ ಆಡಳಿತದಿಂದಾಗಿ 2014ರ ಬಳಿಕ ದೇಶದಲ್ಲಿ ಪರಿವರ್ತನೆಯಾಗಿದ್ದು, ಭಾರತ ವಿಶ್ವಮಟ್ಟದಲ್ಲಿ ಗರುತಿಸುವಂತಾಗಿದೆ. ಭಾರತದ ರಕ್ಷಣೆಯ ಜತೆ ಉತ್ತಮ ಆಡಳಿತ ನೀಡುವುದಿದ್ದರೆ ಅದು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ ಎಂಬುದು ಸ್ಪಷ್ಟವಾಗಿದೆ. ಪ್ರಧಾನಿಯವರು ಜನರು ಆರಾಧಿಸುವ, ಮೆಚ್ಚುವ ಮೋದಿಯಾಗಿ ಬೆಳೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜನತೆ ತನ್ನನ್ನು ಗೆಲ್ಲಿಸಿದಲ್ಲಿ ಜಿಲ್ಲೆಯನ್ನು ದೇಶದ ನಂಬರ್ ಒನ್ ಜಿಲ್ಲೆಯಾಗಿ ಪರಿವರ್ತನೆ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ ಮಿಜಾರ್, ಜಿಲ್ಲಾ ಉಸ್ತುವಾರಿ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಬೊಳುವಾರು ಆಂಜನೇಯ ಮಂತ್ರಾಲಯದ ಬಳಿಯಿಂದ ಪುತ್ತೂರು ನಗರದಲ್ಲಿ ಪಾದಯಾತರೆ ನಡೆಯಿತು. ಶಾಸಕ ಸಂಜೀವ ಮಠಂದೂರು ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಕಾರ್ಯಕರ್ತರು ಚೌಕಿದಾರ್ ಮುಂಡಾಸು ಧರಿಸಿ ಕಾಲ್ನಡಿಗೆಯಲ್ಲಿ ಸಾಗಿದರು.
ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್ ವಂದಿಸಿದರು.ಕೇಶವ ಬಜತ್ತೂರು ಮತ್ತು ವಿದ್ಯಾಗೌರಿ ನಿರೂಪಿಸಿದರು.