ಮಲಗುಂಡಿ ಸ್ವಚ್ಛಗೊಳಿಸುತ್ತಿದ್ದ 4 ಕಾರ್ಮಿಕರು ವಿಷಾನಿಲ ಸೇವಿಸಿ ಮೃತ್ಯು

Update: 2019-04-15 17:18 GMT

 ಚೆನ್ನೈ, ಎ. 15: ತಮಿಳುನಾಡಿನ ತಿರುಪ್ಪುರ್ ಜಿಲ್ಲೆಯ ಬಣ್ಣದ ಕಾರ್ಖಾನೆಯೊಂದರಲ್ಲಿ ಮಲಗುಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ನಾಲ್ಕು ಮಂದಿ ಅಸ್ಸಾಮಿ ಕಾರ್ಮಿಕರು ವಿಷಾನಿಲ ಸೇವಿಸಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.

 ‘‘ಮಲಗುಂಡಿಯ ಒಳಗಡೆ ವಿಷಾನಿಲ ಸೇವಿಸಿದ ಬಳಿಕ ಕಾರ್ಮಿಕನೋರ್ವ ಪ್ರಜ್ಞೆ ಕಳೆದುಕೊಂಡರು. ಇತರರ ಮೂವರು ಅವರನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ನಾಲ್ವರೂ ವಿಷಾನಿಲ ಸೇವಿಸಿ ಮೃತಪಟ್ಟರು’’ ಎಂದು ತಿರುಪ್ಪುರ ದಕ್ಷಿಣದ ಪೊಲೀಸ್ ಉಪ ಆಯುಕ್ತ ನವೀನ್ ಕುಮಾರ್ ಹೇಳಿದ್ದಾರೆ.

 ಮಲಗುಂಡಿಯ ಒಳಗಡೆ ವಿಷಾನಿಲ ಸೇವಿಸಿ ಅಸ್ವಸ್ಥರಾಗಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ್ದರು. ಆದರೆ, ಕಾರ್ಮಿಕರು ವಿಷಾನಿಲ ಸೇವಿಸಿ ಕೂಡಲೇ ಮೃತಪಟ್ಟ ಕಾರಣ ಅವರ ಪ್ರಯತ್ನ ವಿಫಲವಾಯಿತು ಎಂದು ಅವರು ತಿಳಿಸಿದ್ದಾರೆ.

ತ್ಯಾಜ್ಯ ತುಂಬಿಕೊಂಡಿದ್ದ ಮೂರು ಟ್ಯಾಂಕ್‌ಗಳನ್ನು ಈ ಕಾರ್ಮಿಕರು ಸ್ವಚ್ಛಗೊಳಿಸಿದ್ದರು. ನಾಲ್ಕನೇ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಕುಮಾರ್ ಹೇಳಿದ್ದಾರೆ.

ತ್ರಿಪ್ಪುರಾ ಜಿಲ್ಲಾಡಳಿತ ಈ ದುರ್ಘಟನೆಯ ಪ್ರಾಥಮಿಕ ತನಿಖೆ ಆರಂಭಿಸಿದೆ ಎಂದು ವಿಭಾಗೀಯ ಕಂದಾಯ ಅಧಿಕಾರಿ ಸೇನ್‌ಬಾಗ್ ವಾಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News