ಬ್ರಹ್ಮಾವರ: ಮನೆಗೆ ನುಗ್ಗಿ ಲಕ್ಷಾಂತರ ರೂ. ಚಿನ್ನಾಭರಣ ಕಳವು
Update: 2019-04-20 16:15 GMT
ಬ್ರಹ್ಮಾವರ, ಎ. 20: ಹಾವಂಜೆ ಗ್ರಾಮದ ಕೊಳಲಗಿರಿ ದೊಂಪದ ಕುಮೇರಿ ಎಂಬಲ್ಲಿ ಎ.19ರಂದು ಮಧ್ಯಾಹ್ನ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಬ್ಯಾಪಿಸ್ಟ್ ಡಿಸೋಜ ಎಂಬವರು ತನ್ನ ಮಗಳ ಜೊತೆ ಮನೆಗೆ ಬೀಗ ಹಾಕಿ ಬೀಗವನ್ನು ಮನೆಯ ಎದುರಿನ ಗೋಡೆಯ ಕಂಬದ ಮೇಲೆ ಇಟ್ಟು ಚರ್ಚಿಗೆ ಹೋಗಿದ್ದು, ಪೂಜೆ ಮುಗಿಸಿ ಮಗಳು ಸಪ್ನ ಡಿಸೋಜ ಮನೆಗೆ ಬಂದು ನೋಡಿ ದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಹೊರಗೆ ಇರಿಸಿದ ಬೀಗದ ಕೀಯನ್ನು ಉಪಯೋಗಿಸಿ ಮನೆಯ ಎದುರಿನ ಬಾಗಿಲು ತೆರೆದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಚಿನ್ನದ ನೆಕ್ಲೆಸ್, ಚೈನ್, ಹವಳ ಸರ, 4 ಚಿನ್ನದ ಬಳೆಗಳು, ಚಿನ್ನದ ಲೋಲಕ ಕೀವಿಯೊಲೆ, ಬಿಳಿ ಕಲ್ಲಿನ ಚಿನ್ನದ ಕಿವಿಯೊಲೆ ಸೇರಿದಂತೆ ಒಟ್ಟು 78 ಗ್ರಾಂ ತೂಕದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.