ವೈದ್ಯರದ್ದು ಸೇವೆಗಾಗಿ ಒಪ್ಪಂದವೇ ಹೊರತು ಸೇವೆಯ ಒಪ್ಪಂದ ಅಲ್ಲ: ಡಾ.ಶಾನುಭಾಗ್

Update: 2019-04-21 14:27 GMT

 ಉಡುಪಿ, ಎ.20: ವೈದ್ಯಕೀಯ ನಿರ್ಲಕ್ಷಕ್ಕೆ ಸಂಬಂಧಿಸಿ ಹೋಮಿಯೋಪತಿ ವಿರುದ್ಧ ಶೇ.4, ಆಯುವೇರ್ದಿಕ್ ವಿರುದ್ಧ ಶೇ.4 ಮತ್ತು ಹಲೋಪತಿ ವಿರುದ್ಧ ಶೇ.92 ಪ್ರಕರಣಗಳು ಗ್ರಾಹಕ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಚಿಕಿತ್ಸೆ ಸಂಬಂಧ ವೈದ್ಯರನ್ನು ಪ್ರಶ್ನಿಸುವ ಹಕ್ಕು ರೋಗಿ ಹಾಗೂ ರೋಗಿ ಸಂಬಂಧಿಗಳಿಗೆ ಇವೆ ಎಂದು ಮಾನವ ಹಕ್ಕು ಹೋರಾಟ ಗಾರ ಹಾಗೂ ವೈದ್ಯಕೀಯ ಕಾನೂನು ತಜ್ಞ ಡಾ.ರವೀಂದ್ರನಾಥ್ ಶಾನುಭಾಗ್ ಹೇಳಿದ್ದಾರೆ.

ಉಡುಪಿ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ ಹಾಗೂ ಹೋಮ್ ಡಾಕ್ಟರ್ಸ್‌ ಫೌಂಡೇಶನ್‌ನ ಜಂಟಿ ಆಶ್ರಯದಲ್ಲಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದಲ್ಲಿ ರವಿವಾರ ಆಯೋಜಿಸಲಾದ ವೈದ್ಯಕೀಯ ನಿರ್ಲಕ್ಷತೆಯ ಕುರಿತ ಕಾನೂನು ಮಾಹಿತಿ ಶಿಬಿರದಲ್ಲಿ ಅವರು ಮಾತ ನಾಡುತಿದ್ದರು.

ವೈದ್ಯರು ರೋಗಿಯ ಚಿಕಿತ್ಸೆಯ ಸಂದರ್ಭ ಯಾವುದನ್ನು ಮಾಡಬೇಕೋ ಅದನ್ನು ಮಾಡದಿದ್ದರೆ, ಯಾವುದನ್ನು ಮಾಡಬಾರದೋ ಅದನ್ನು ಮಾಡಿದರೆ ವೃತ್ತಿ ನಿರ್ಲಕ್ಷವಾಗುತ್ತದೆ. ವೈದ್ಯರ ಹಾಗೂ ರೋಗಿಗಳ ಸಂಬಂಧ ಸೇವೆಗಾಗಿ ಒಪ್ಪಂದವೇ ಹೊರತು ಸೇವೆಯ ಒಪ್ಪಂದ ಅಲ್ಲ. ಹಾಗಾಗಿ ವೈದ್ಯರು ಕೂಡ ಗ್ರಾಹಕರ ಕಾನೂನಿನ ವ್ಯಾಪ್ತಿಗೆ ಒಳಪಡುತ್ತಾರೆ ಎಂದರು.

ವೈದ್ಯಕೀಯ ಶಿಕ್ಷಣದ ಪಠ್ಯಪುಸ್ತಕದಲ್ಲಿರುವ ಚಿಕಿತ್ಸೆ ಹಾಗೂ ಶೇ.95ರಷ್ಟು ವೈದ್ಯರು ಪಾಲಿಸುವ ಚಿಕಿತ್ಸೆಯ ವಿಧಾನಗಳ ಕುರಿತು ರೋಗಿಗಳು ಪ್ರಶ್ನಿಸು ವಂತಿಲ್ಲ. ಆದರೆ ವೈದ್ಯರ ಚಿಕಿತ್ಸೆಯಲ್ಲಿ ನಿರ್ಲಕ್ಷ, ವಿದ್ಯಾರ್ಹತೆ, ಸರಿಯಾದ ಮಾಹಿತಿ ನೀಡದೆ ಚಿಕಿತ್ಸೆ, ಸರಿಯಾದ ದಾಖಲೆಗಳ ನಿರ್ವಹಣೆ ಇಲ್ಲದಿರುವ ಮತ್ತು ಮಾಹಿತಿ ಹಾಗೂ ಒಪ್ಪಿಗೆ ಇಲ್ಲದೆ ಚಿಕಿತ್ಸೆ ನೀಡುವ ಬಗ್ಗೆ ಪ್ರಶ್ನಿಸಬು ದಾಗಿದೆ ಎಂದು ಅವರು ತಿಳಿಸಿದರು.

ಹೋಮ್ ಡಾಕ್ಟರ್ಸ್‌ ಫೌಂಡೇಶನ್‌ನ ಡಾ.ಶಶಿಕಿರಣ್ ಶೆಟ್ಟಿ ಶಿಬಿರವನ್ನು ನಡೆಸಿಕೊಟ್ಟರು. ಬಳಿಕ ಸಭಿಕರೊಂದಿಗೆ ವೈದ್ಯಕೀಯ ನಿರ್ಲಕ್ಷತೆ ಕುರಿತು ಸಂವಾದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News