ತ್ರಾಸಿಯಲ್ಲಿ ಸ್ವೀಪ್ ಮತದಾನ ಜಾಗೃತಿ ಅಭಿಯಾನ ಸಮಾಪನ

Update: 2019-04-21 16:22 GMT

ಗಂಗೊಳ್ಳಿ, ಎ.21: ಚುನಾವಣಾ ಆಯೋಗ, ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಆಶ್ರಯದಲ್ಲಿ ತಿಂಗಳುಗಳ ಕಾಲ ಜಿಲ್ಲೆಯ ಗ್ರಾಪಂ ಮಟ್ಟದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಶನಿವಾರ ತ್ರಾಸಿ ಕಡಲ ತೀರಲ್ಲಿ ವಿಶಿಷ್ಟವಾಗಿ ಸಮಾಪನಗೊಂಡಿತು.

ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧು ಬಿ.ರೂಪೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಪ್ರವಾಸೋದ್ಯಮ ಇಲಾಖೆಯ ಅನಿತಾ ಮತ್ತು ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಇಲ್ಲಿ ಯಾವುದೇ ಸಭಾ ಕಾರ್ಯಕ್ರಮವಾಗಲಿ, ಭಾಷಣಗಳಾಗಲಿ ಇರಲಿಲ್ಲ. ಭಾಗವಹಿಸಿದ್ದ ಎಲ್ಲರೂ ಮತದಾನದ ಪಾವಿತ್ರ್ಯ ರಕ್ಷಿಸುವ ಪ್ರತಿಜ್ಞೆ ಸ್ವೀಕರಿಸಿದರು. ಪ್ರಮುಖರು ಬಲೂನ್‌ಗಳನ್ನು ಹಾರಿ ಬಿಡುವುದರ ಮೂಲಕ ಅಭಿಯಾನದ ಸಮಾಪನ ಘೋಷಿಸಿದರು. ಇದಕ್ಕೂ ಮೊದಲು ಗಾಯಕ ಗಣೇಶ ಗಂಗೊಳ್ಳಿ ಭಾವಗೀತೆ ಹಾಗೂ ಮತದಾನದ ಮಹತ್ವ ಸಾರುವ ಹಾಡುಗಳನ್ನು ಹಾಡಿದರು.

ಮರವಂತೆಯ ಕೊರಗ ತನಿಯ ಕಲಾತಂಡದ ಸದಸ್ಯರು ಡೋಲು ವಾದನ ಪ್ರಸ್ತುತ ಪಡಿಸಿದರು. ಕೋಟದ ಯಕ್ಷಪೀಠ ಯಕ್ಷಗಾನ ತಂಡ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶ್ಯಾನುಭಾಗ್ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡ ಮತದಾನ ವಿಜಯ ಕಿರು ಯಕ್ಷಗಾನ ಪ್ರದರ್ಶಿಸಿದರು. ಮಹಿಳೆಯರು ಮರಳ ದಂಡೆಯ ಮೇಲೆ ಎಪ್ರಿಲ್ 23 ಆಕೃತಿಯನ್ನು ರಚಿಸುವುದರ ಮೂಲಕ ಮತದಾನದ ದಿನವನ್ನು ನೆನಪಿಸಿದರು.

ಗಾಳಿಪಟ ಹಾರಾಟ, ಹಗ್ಗಜಗ್ಗಾಟ, ಚಮಚೆ-ನಿಂಬೆ ಓಟ ನಡೆದವು. ಮರಳ ದಂಡೆಯ ಮೇಲೆ ಮತದಾನದ ಮಹತ್ವ ಮತ್ತು ಎಲ್ಲ ಅರ್ಹ ಮತದಾರರು ತಪ್ಪದೆ ಮುಕ್ತ, ನಿರ್ಭೀತ ಮತ ಚಲಾಯಿಸುವ ಅಗತ್ಯವನ್ನು ಬಿಂಬಿಸುವ ಫಲಕಗಳನ್ನು ನೆಡಲಾಗಿತ್ತು. ಯಕ್ಷಗಾನ ಕಲಾವಿದರನ್ನು ಮತ್ತು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರನ್ನು ಗೌರವಿಸಲಾಯಿತು.

ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶೇಷಶಯನ ಕಾರಿಂಜ, ತಾಪಂ ಕಾರ್ಯನಿರ್ವಹಣಾಧಿ ಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರ ಅಧಿಕಾರ ವರ್ಗದವರು ಉಪಸ್ಥಿತರಿದ್ದರು. ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News