ಶ್ರೀಲಂಕಾ ದಾಳಿ: ಭಾರತ ಮುನ್ನೆಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಳ್ಳದ ದ್ವೀಪರಾಷ್ಟ್ರ

Update: 2019-04-22 04:31 GMT

ಹೊಸದಿಲ್ಲಿ, ಎ.22: ಶ್ರೀಲಂಕಾದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ದಾಳಿಯ ಬಗ್ಗೆ ಭಾರತ ನಿರ್ದಿಷ್ಟವಾಗಿ ಗುಪ್ತಚರ ಮಾಹಿತಿಯನ್ನು ನೆರೆರಾಷ್ಟ್ರದ ಬಗ್ಗೆ ಹಂಚಿಕೊಂಡಿದ್ದರೂ, ಅಲ್ಲಿನ ಸರಕಾರ ಸೂಕ್ತ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿರಲಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

"ಸಂಭಾವ್ಯ ದಾಳಿ ಬಗ್ಗೆ ಗುಪ್ತಚರ ಮಾಹಿತಿ ಇತ್ತು; ಆದರೆ ಇದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಂಡಿರಲಿಲ್ಲ" ಎಂದು ಪ್ರಧಾನಿ ರನೀಲ್ ವಿಕ್ರಮಸಿಂಘೆ ಒಪ್ಪಿಕೊಂಡಿದ್ದಾರೆ.

ಗುಪ್ತಚರ ವಿಭಾಗದ ಮೂಲಗಳ ಪ್ರಕಾರ, ಶ್ರೀಲಂಕಾದ ನ್ಯಾಷನಲ್ ತೌಹೀದ್ ಜಮಾಅತ್ ಜಹ್ರಾನ್ ಹಾಸೀಂ ಮತ್ತು ಸಹಚರರು ಈ ದ್ವೀಪರಾಷ್ಟ್ರದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಸಂಚು ರೂಪಿಸಿದ್ದರೆನ್ನಲಾಗಿದೆ. ಈ ಯೋಜನೆಯ ಅಂಗವಾಗಿ ಅಲ್ಲಿ ಓಡಾಟ ನಡೆಸಿ, ಸ್ಫೋಟಕಗಳನ್ನು ತುಂಬಿದ್ದ ಮೋಟರ್‌ಸೈಕಲ್ ಅನ್ನು ಕಟ್ಟಂಕುಡಿ ಸಮೀಪದ ಪಲ್‌ಮುನೈ ಎಂಬಲ್ಲಿ ಇರಿಸಿದ್ದರು. ಎಪ್ರಿಲ್ 22 ಅಥವಾ ಅದಕ್ಕೂ ಮುನ್ನವೇ ಈ ದಾಳಿ ನಡೆಸಲು ಯೋಜಿಸಿದ್ದಾಗಿ ಗುಪ್ತಚರ ವಿಭಾಗ ಹೇಳಿತ್ತು. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಚರ್ಚ್ ಹಾಗೂ ಹೋಟೆಲ್ ಸೇರಿದಂತೆ ಎಂಟು ಸ್ಥಳಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಈ ಬಗ್ಗೆ ಎಪ್ರಿಲ್ 4ರಂದು ಶ್ರೀಲಂಕಾಗೆ ಮಾಹಿತಿ ನೀಡಲಾಗಿತ್ತು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಈ ಮಾಹಿತಿ ಆಧಾರದಲ್ಲಿ ಕ್ರಮ ಕೈಗೊಂಡ ಶ್ರೀಲಂಕಾದ ಪೊಲೀಸ್ ಮುಖ್ಯಸ್ಥ ಪುಜೂತ್ ಜಯಸುಂದರ 10 ದಿನಗಳ ಕಟ್ಟೆಚ್ಚರ ನೀಡಿದ್ದರು. "ವಿದೇಶಿ ಗುಪ್ತಚರ ಏಜೆನ್ಸಿಯ ಮಾಹಿತಿ ಪ್ರಕಾರ, ಎನ್‌ಟಿಜೆ, ಪ್ರಮುಖ ಚರ್ಚ್ ಹಾಗೂ ಭಾರತೀಯ ಹೈಕಮಿಷನ್ ಗುರಿ ಮಾಡಿ ಆತ್ಮಹತ್ಯೆ ದಾಳಿ ನಡೆಸಲು ಯೋಜಿಸಿದೆ" ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News