ಬೇಸಿಗೆ ಶಿಬಿರ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪೂರಕ: ಗ್ರೇಸಿ ಗೊನ್ಸಾಲ್ವಿಸ್
ಉಡುಪಿ, ಎ. 25: ಬೇಸಿಗೆ ಶಿಬಿರವು ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಪೂರಕವಾಗಿದ್ದು, ಮಕ್ಕಳಿಗೆ ಚಿತ್ರಕಲೆ, ಕರಕುಶಲ ಸಿದ್ಧತೆ ತರಬೇತಿ, ಕರಾಟೆ ಹಾಗೂ ಪ್ರವಾಸ ಸ್ಥಳಗಳ ವೀಕ್ಷಣೆಗೆ ಅವಕಾಶವಿದೆ. ಇದರ ಸದುಪಯೋಗ ಎಲ್ಲರೂ ಪಡೆಯುವಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಹೇಳಿದ್ದಾರೆ.
ಗುರುವಾರ ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಉಡುಪಿ ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಬಾಲಭವನ ಬ್ರಹ್ಮಗಿರಿಯಲ್ಲಿ ಜರುಗಿದ ರಜಾ-ಮಜಾ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡುತಿದ್ದರು.
ಶಿಬಿರಾರ್ಥಿ ಮಕ್ಕಳು ಹಾಗೂ ಅಧಿಕಾರಿಗಳು ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ವೀಣಾ ವಿವೇಕಾನಂದ ರಾವ್, ಚಂದ್ರಿಕಾ ಎಸ್. ನಾಯಕ್, ಸಂಪನ್ಮೂಲ ವ್ಯಕ್ತಿಗಳಾದ ಹೇಮಲತಾ, ಮಂಜುನಾಥ, ನಿಮಿತ, ರಾಜಶೇಖರ್, ರಕ್ಷಾ ಹಾಗೂ ನೂರಾರು ಮಕ್ಕಳು ಉಪಸ್ಥಿತರಿದ್ದರು. ರಮ್ಯಾ ಪಿ. ಕಾರ್ಯಕ್ರಮ ನಿರೂಪಿಸಿದರು.