ರೋಹಿತ್ ತಿವಾರಿ ಹತ್ಯೆಗೆ ಸೊತ್ತು, ಪ್ರೇಮ ಸಂಬಂಧ ಕಾರಣ: ತಾಯಿ ಉಜ್ವಲ್ ಶರ್ಮಾ

Update: 2019-04-25 16:16 GMT

ಮುಂಬೈ, ಎ. 25: ಪತಿ ರೋಹಿತ್ ತಿವಾರಿಯನ್ನು ಹತ್ಯೆಗೈದಿರುವುದನ್ನು ಪೊಲೀಸರಲ್ಲಿ ಒಪ್ಪಿಕೊಳ್ಳುವುದರೊಂದಿಗೆ ಅಪೂರ್ವ ಅವರ ಹುಚ್ಚು ನಿರೀಕ್ಷೆ ಹಾಗೂ ಕನಸುಗಳು ನುಚ್ಚು ನೂರಾಗಿವೆ. ಪತಿ ಹಾಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಡಿ. ತಿವಾರಿ ಅವರ ಪುತ್ರ ರೋಹಿತ್ ತಿವಾರಿಯನ್ನು ಹತ್ಯೆಗೈದ ಬಳಿಕ ಬಂಧನಕ್ಕೊಳಗಾಗಿರುವ ನ್ಯಾಯವಾದಿ ಅಪೂರ್ವ, ತನ್ನ ವಿವಾಹದಲ್ಲಿ ‘ಪ್ರಕ್ಷುಬ್ದತೆ ಹಾಗೂ ಅಸಮಾಧಾನ’ ಇತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪತಿಯನ್ನು ತಾನೇ ಹತೈಗೈದಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೀವ್ ರಂಜನ್ ಹೇಳಿದ್ದಾರೆ.

ದೊಡ್ಡ ಗಲಾಟೆ ಆದ ಬಳಿಕ ಅಪೂರ್ವ ತನ್ನ ಪತಿಯ ಕತ್ತು ಹಿಸುಕಿದರು ಹಾಗೂ ತಲೆದಿಂಬಿನಿಂದ ಒತ್ತಿ ಉಸಿರು ಕಟ್ಟಿಸಿ ಹತ್ಯೆಗೈದರು. ರೋಹಿತ್ ತಿವಾರಿ ಮದ್ಯಪಾನ ಮಾಡಿದ್ದರಿಂದ ವಿರೋಧಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇಂದೋರ್ ಮೂಲದ ಅಪೂರ್ವ ಶುಕ್ಲಾಗೆ ರೋಹಿತ್ ತಿವಾರಿ 2017ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾಗಿದ್ದರು. ಒಂದು ವರ್ಷದ ಬಳಿಕ ಎಪ್ರಿಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಅನಂತರ ಒಂದು ತಿಂಗಳಲ್ಲಿ ವಿವಾಹವಾಗಿದ್ದರು. ಆದರೆ, ದಿನ ಕಳೆದಂತೆ ಅವರ ದಾಂಪತ್ಯ ಹದಗೆಡುತ್ತಿತ್ತು. ಅವರಿಬ್ಬರು ಪ್ರತ್ಯೇಕ ಕೊಠಡಿಯಲ್ಲಿ ಜೀವಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅವರು ಒಪ್ಪಂದದ ವಿಚ್ಛೇದನದ ಬಗ್ಗೆ ಹಲವು ಬಾರಿ ಚರ್ಚಿಸಿದ್ದರು. ಜೂನ್‌ನಲ್ಲಿ ವಿವಾಹ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದರು.

ವಿವಾಹಕ್ಕಿಂತ ಮುನ್ನ ಅಪೂರ್ವ ಅವರಿಗೆ ಇನ್ನೊಬ್ಬನೊಂದಿಗೆ ಪ್ರೇಮ ಸಂಬಂಧ ಇತ್ತು. ಅವರ ಕಟುಂಬ ಧನ ಪಿಶಾಚಿಗಳು. ಅವರಿಗೆ ಡಿಫೆನ್ಸ್ ಕಾಲನಿಯಲ್ಲಿರುವ ನಮ್ಮ ಸೊತ್ತಿನ ಮೇಲೆ ಕಣ್ಣಿತ್ತು ಎಂದು ರೋಹಿತ್ ಅವರ ತಾಯಿ ಉಜ್ವಲ್ ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News