ಹೊಳೆಗೆ ಹಾರಿ ಯುವಕ ಆತ್ಮಹತ್ಯೆ

Update: 2019-04-25 17:12 GMT

ಉದ್ಯಾವರ, ಎ.25: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆ ಬಳಿಯ ಪಾಪನಾಶಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಉದ್ಯಾವರ ನಿವಾಸಿ, ಬಿಜೆಪಿ ಕಾರ್ಯಕರ್ತ ಅಶೋಕ ಅಮೀನ್ (39) ಎಂದು ಗುರುತಿಸಲಾಗಿದೆ.

ಅಶೋಕ್ ಗುಡ್ಡೆಯಂಗಡಿಯ ಪ್ಲಾಸ್ಟಿಕ್ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದು, ವಿಪರೀತ ಸಾಲ ಮಾಡಿಕೊಂಡಿದ್ದರೆಂದು ಹೇಳಲಾಗಿದೆ. ಇಂದು ಬೆಳಗ್ಗೆ ಮನೆಯಿಂದ ಹೊರಟ ಅವರು ಉದ್ಯಾವರ ಸೇತುವೆ ಬಳಿ ಇರುವ ಪಾರೆಸ್ಟ್‌ಗೇಟ್ ಸಮೀಪದ ಬಬ್ಬುಸ್ವಾಮಿ ದೈವಸ್ಥಾನದ ಬಳಿ ತನ್ನ ಬೈಕ್ ನಿಲ್ಲಿಸಿ 10 ಗಂಟೆ ಸುಮಾರಿಗೆ ಹೊಳೆಗೆ ಹಾರಿದ್ದರೆಂದು ಹೇಳಲಾಗಿದೆ.

ತಕ್ಷಣ ಕಾಪು ಪೊಲೀಸರಿಗೆ ಮಾಹಿತಿ ತಲುಪಿದ್ದು, ಹೊಳೆಯಲ್ಲಿ ಹುಡುಕಾಡಿದಾಗ 10:40ರ ಸುಮಾರಿಗೆ ಮೃತದೇಹ ಹೊಳೆ ನೀರಿನಲ್ಲಿ ಪತ್ತೆಯಾಗಿದೆ. ಸಾಲದ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಮೃತ ಅಶೋಕ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News