ಮಾಂಡ್ ಸೊಭಾಣ್: ‘ಖಮಿರ್’ ರಜಾ ಶಿಬಿರ ಉದ್ಘಾಟನೆ
ಮಂಗಳೂರು,ಎ.27: ಕಿಣ್ವಗಳ ಬಳಕೆಯಿಂದ ಹಿಟ್ಟು ಹುದುಗು ಬಂದು ದ್ವಿಗುಣ, ತ್ರಿಗುಣಗೊಳ್ಳುತ್ತದೆ. ಅದೇ ರೀತಿ ಇಂತಹ ಶಿಬಿರಗಳು ನಮ್ಮಿಳಗಿರುವ ಸುಪ್ತ ಪ್ರತಿಭೆಗಳನ್ನು ಬೆಳಗಲು ಸಹಕಾರಿಯಾಗಿದೆ. ಆದರೆ ಹೊಸತನಕ್ಕೆ ತೆರೆದುಕೊಳ್ಳುವ ಹಾಗೂ ದೊರೆತ ಅವಕಾಶವನ್ನು ಸದುಪಯೋಗಪಡಿಸುವ ಮನಸ್ಸು ಇರಬೇಕು. ಈ ಶಿಬಿರವನ್ನು ಆಯೋಜಿಸುವ ಮೂಲಕ ಮಾಂಡ್ ಸೊಭಾಣ್ ಕೊಂಕಣಿಯ ಉಳಿವಿಗೆ ಅಪಾರ ಕೊಡುಗೆ ನೀಡಿದೆ ಎಂದು ಗಾಯಕಿ ಹೆರಾ ಪಿಂಟೊ ಹೇಳಿದರು.
ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್ ಆಯೋಜಿಸಿದ ‘ಖಮಿರ್’ ಮಕ್ಕಳ ರಜಾಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ವಿಭಾಗಗಳ ತರಬೇತುದಾರರಾದ ರಾಹುಲ್ ಪಿಂಟೊ, ವೆಲನಿ ಗೋವಿಯಸ್, ಶ್ರವಣ್ ಬಾಳಿಗಾ, ಜೇಸನ್, ಡಿಯಾಲ್ ಆಶೆಲ್ ಡಿಸಿಲ್ವಾ ಹಾಗೂ ವಿಕ್ಟರ್ ಮತಾಯಸ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ವೇದಿಕೆಯಲ್ಲಿ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.