ಪ್ರೀತಿಯಿಂದ ಬದುಕಿನಲ್ಲಿ ಯಶಸ್ಸು ಸಾಧ್ಯ: ಕದ್ರಿ ನಿರ್ಮಾಲ್ ನಾಥಜೀ ಸ್ವಾಮೀಜಿ
ಉಡುಪಿ, ಎ.28: ಮನುಷ್ಯನ ಬದುಕಿನಲ್ಲಿ ಸುಖದುಃಖ, ಗೆಲುವು ಸೋಲು ಎಂಬುದು ಆತನ ಕರ್ಮದಿಂದ ಬರುತ್ತದೆ. ಪ್ರತಿಯೊಂದು ಕಾರ್ಯವನ್ನು ಪ್ರೀತಿಯಿಂದ ನಿರ್ವಹಿಸಿದರೆ ಯಶಸ್ಸು ಸಾಧ್ಯವಾಗುತ್ತದೆ. ಬದುಕಿನಲ್ಲಿ ಎಲ್ಲರನ್ನು ಪ್ರೀತಿಸುವುದರೊಂದಿಗೆ ಜೀವಿಸಬೇಕು ಎಂದು ಕದ್ರಿ ಯೋಗೀಶ್ವರ ಮಠದ ರಾಜ ನಿರ್ಮಾಲ್ ನಾಥಜೀ ಸ್ವಾಮೀಜಿ ಹೇಳಿದ್ದಾರೆ.
ಜೋಗಿ ಸಮಾಜ ಸೇವಾ ಸಮಿತಿ ಉಡುಪಿ-ಕಾರ್ಕಳ ವತಿಯಿಂದ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ಸಮಿತಿಯ ದಶಮಾನೋತ್ಸವ ‘ಜೋಗಿ ದಶಮಿ-2019’ ಹಾಗೂ ಜೋಗಿ ವಟುಗಳ ದೀಕ್ಷಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಗವಂತ ಪ್ರೀತಿ, ಧ್ಯಾನ, ಭಕ್ತಿಗೆ ಒಲಿಯುತ್ತಾನೆ. ಧಾನ್ಯಕ್ಕಿಂತ ದೊಡ್ಡ ಕಾರ್ಯ ಬೇರೊಂದಿಲ್ಲ. ಹೆತ್ತವರನ್ನು ಪ್ರೀತಿಸದ ವ್ಯಕ್ತಿ ಎಷ್ಟೆ ದೊಡ್ಡ ಕರ್ಮ ಮಾಡಿದರೂ, ಕಲಿತರು ಯಾವುದೇ ಪ್ರಯೋಜನ ಇಲ್ಲ. ಆದುದರಿಂದ ಪ್ರತಿಯೊಬ್ಬರು ತಂದೆ ತಾಯಿಯನ್ನು ಪ್ರೀತಿಸಬೇಕು ಮತ್ತು ಅವರ ಸೇವೆ ಮಾಡಬೇಕು. ಆಗ ದೇವರು ನಮಗೆ ಸುಖ ಶಾಂತಿ ಸಹಿತ ಎಲ್ಲವನ್ನು ನೀಡುತ್ತಾನೆ ಎಂದರು.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ಧರ್ಮ ರಕ್ಷಣೆಯಿಂದ ದೇಶದ ರಕ್ಷಣೆ ಸಾಧ್ಯ. ಧರ್ಮವನ್ನು ರಕ್ಷಿಸಬೇಕಾದರೆ ಯುವ ಜನಾಂಗಕ್ಕೆ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಹಾಗೂ ಪರಂಪರೆಯನ್ನು ಹೇಳಿಕೊಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜೋಗಿ ಸಮಾಜ ಸೇವಾ ಸಮಿತಿ ಅಧ್ಯಕ್ಷ ಪಿ.ಸುರೇಶ್ ಕುಮಾರ್ ಜೋಗಿ ಹೆಬ್ರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಡಗುಬೆಟ್ಟು ಕೋಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಇಂದ್ರಾಳಿ ಜಯಕರ ಶೆಟ್ಟಿ, ಉದ್ಯಮಿಗಳಾದ ಮನೋಹರ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಕೋಟ ಅಮೃತೇಶ್ವರಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಮುಖ್ಯ ಅತಿಥಿಗಳಾಗಿದ್ದರು.
ಬೆಂಗಳೂರು ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ರಾಜಶೇಖರ ಜೋಗಿ, ಕರ್ನಾಟಕ ಜೋಗಿ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಹಲವರಿ ಮಠ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಜೋಗಿ ಕಟ್ಬೇಲ್ತೂರು, ಉದ್ಯಮಿಗಳಾದ ಚಂದ್ರಶೇಖರ ಜೋಗಿ, ಶ್ರೀನಿವಾಸ ಜೋಗಿ, ಉದಯಕುಮಾರ್ ಜೋಗಿ ಬಜಗೋಳಿ, ಉದಯ ಜೋಗಿ, ಜೋಗಿ ಮಹಿಳಾ ವೇದಿಕೆ ಅಧ್ಯಕ್ಷೆ ಎನ್.ಲಕ್ಷ್ಮೀ ಜೋಗಿ, ಸಂಜಯ್, ನವೀನ್ಚಂದ್ರ ಜೋಗಿ ಉಪಸ್ಥಿತರಿದ್ದರು.