ಧರ್ಮದ ಆಧಾರದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ: ಕಾರ್ಮಿಕ ದಿನಾಚರಣೆಯಲ್ಲಿ ಚಿಂತಕ ಜಿ.ರಾಜಶೇಖರ್

Update: 2019-05-02 14:32 GMT

ಉಡುಪಿ, ಮೇ 2: ಈ ದೇಶದಲ್ಲಿ ಧರ್ಮದ ಆಧಾರದಲ್ಲಿ ತಲೆ ಲೆಕ್ಕ ಹಾಕಿ ದರೆ ಹಿಂದುಗಳೇ ಬಹುಸಂಖ್ಯಾತರು. ಆದರೆ ಉದ್ಯೋಗಿಗಳು, ನಿರುದ್ಯೋಗಿ ಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡರೆ ದೇಶದಲ್ಲಿ ಅರೆ ಉದ್ಯೋಗಿ, ನಿರುದ್ಯೋಗಿಗಳ ಸಂಖ್ಯೆಯೇ ಜಾಸ್ತಿ ಇದೆ. ಮಾಂಸಾಹಾರಿ, ಸಸ್ಯಾಹಾರಿಗಳ ಆಧಾರದಲ್ಲಿ ತಲೆಲೆಕ್ಕ ಹಾಕಿದರೆ ಮಾಂಸಾಹಾರಿಗಳೇ ಬಹುಸಂಖ್ಯಾತರು. ಹೀಗಾಗಿ ಬಹುಸಂಖ್ಯಾತರು, ಅಲ್ಪಸಂಖ್ಯಾತರು ಎನ್ನುವುದು ದ್ರವಿ ರೂಪದ ಕಲ್ಪನೆಯೇ ಹೊರತು, ಅದು ಶಾಶ್ವತವೂ ಅಲ್ಲ, ಸ್ಥಿರವೂ ಅಲ್ಲ ಎಂದು ನಾಡಿನ ಖ್ಯಾತ ಚಿಂತಕ ಜಿ. ರಾಜಶೇಖರ್ ಹೇಳಿದ್ದಾರೆ.

ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ಉಡುಪಿ ತಾಲೂಕು ಘಟಕದ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸೈನಿಕರ ಸ್ಮಾರಕದ ಬಳಿ ಬುಧವಾರ ಸಂಜೆ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಹಿಂದೂ ರಾಷ್ಟ್ರ ನಿರ್ಮಾಣ ಮಾಡುತ್ತೇವೆಂದು ಹಸಿಹಸಿ ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಶಿಕ್ಷಣ ಪಡೆದ ಯುವಕರಿಗೆ ಯಾವ ರೀತಿಯ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂಬುದರ ಮೇಲೆಯೇ ದೇಶದ ಭವಿಷ್ಯ ಅಡಗಿದೆ ಎಂದು ರಾಜಶೇಖರ್ ನುಡಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಅವರು ಮಾತನಾಡಿ, ದೇಶದಲ್ಲಿ ಕಳೆದ ಐದು ವರ್ಷಗಳಿಂದ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಕಳೆದ 45 ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಪ್ರಸ್ತುತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬೆಲೆಏರಿಕೆಯ ಪರಿಣಾಮ ಜನಸಾಮಾನ್ಯ ರಿಗೆ ಬದುಕು ನಡೆಸುವುದೇ ದುಸ್ತರವಾಗಿದೆ. ನೋಟು ಅಮಾನ್ಯೀಕರಣದ ಬಳಿಕ ನಗರ ಪ್ರದೇಶದಲ್ಲಿ ಉದ್ಯೋಗ ಕಡಿಮೆಯಾಗಿದೆ. ಜನರು ಈಗ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ವಲಸೆ ಹೋಗುತಿದ್ದಾರೆ ಎಂದರು.

ದೇಶದಲ್ಲಿ ಕಾರ್ಮಿಕರಿಗೆ ತಿಂಗಳಿಗೆ 18 ಸಾವಿರ ರೂ. ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದು ಕಾರ್ಮಿಕರ ಒತ್ತಾಯವಾಗಿದೆ. ಆದರೆ ಇನ್ನೂ ಸಹ ಕನಿಷ್ಠ ವೇತನ ನಿಗದಿಯಾಗಿಲ್ಲ. ಇತ್ತೀಚೆಗೆ ಕರ್ನಾಟಕ ಕನಿಷ್ಠ ವೇತನ ಮಂಡಳಿ ಕರ್ನಾಟಕ ರಾಜ್ಯದಲ್ಲಿ ವಿವಿಧ ಉದ್ಯಮಗಳಲ್ಲಿ ದುಡಿಯುವ 37 ಬಗೆಯ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಆದರೆ ಇದರ ವಿರುದ್ಧ ಮಾಲಕರು 1600 ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ದಾಖಲಿಸಿದ್ದಾರೆ ಎಂದು ಮಹಾಂತೇಶ್ ತಿಳಿಸಿದರು.

ಆದರೆ ಹೈಕೋರ್ಟ್ ನ್ಯಾಯಾಧೀಶರು ಕಾರ್ಮಿಕರ ಪರವಾಗಿ ಆದೇಶ ನೀಡಿದ್ದಾರೆ. ಶ್ರಮಿಕರ ನ್ಯಾಯಬದ್ಧವಾದ ಹಕ್ಕನ್ನು ಕಾಪಾಡುವುದು ಮಾಲಕರು ಹಾಗೂ ಸರಕಾರದ ಕರ್ತವ್ಯ. ಹೀಗಾಗಿ ಕಾರ್ಮಿಕರನ್ನು ಹಗ್ಗವಾಗಿ ದುಡಿಸಿ ಕೊಳ್ಳಬಾರದು ಎಂದು ಅವರು ಹೇಳಿದ್ದಾರೆ ಎಂದರು.
ಪ್ರಧಾನಿ ಮೋದಿ ಕಳೆದ 5 ವರ್ಷಗಳಲ್ಲಿ 119 ದಿನಗಳ ಕಾಲ ವಿದೇಶದಲ್ಲಿ ಸಂಚಾರ ಮಾಡಿದ್ದಾರೆ. ದೇಶದ ಸಂಸತ್ತಿಗೆ ಉತ್ತರದಾಹಿ ಆಗಬೇಕಿದ್ದ ಪ್ರಧಾನಿ, ಕೇವಲ 19 ದಿನಗಳ ಕಾಲ ಮಾತ್ರ ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ವಿದೇಶ ಪ್ರವಾಸ ಕೈಗೊಳ್ಳುವುದರ ಬಗ್ಗೆ ಅಸಮಾಧಾನವಿಲ್ಲ. ಆದರೆ, ಜಗತ್ತಿನ ಕಾರ್ಮಿಕ ವರ್ಗ ಹೇಗಿದೆ, ಅವರ ಬದುಕು ಹೇಗಿದೆ ಎಂಬುವುದನ್ನು ಅಧ್ಯಯನ ಮಾಡಿ ಇಲ್ಲಿ ಅಳವಡಿಸಿದರೆ ಸ್ವಾಗತಾರ್ಹ ಎಂದರು.

ಕಳೆದ ಡಿಸೆಂಬರ್ ತಿಂಗಳಲ್ಲಿ ಹೊರಬಿದ್ದ ಅಂಕಿಅಂಶದ ಪ್ರಕಾರ ದೇಶದ ಶೇ.50ರಷ್ಟು ಆಸ್ತಿ ಕೇವಲ 8 ಮನೆತನಗಳಲ್ಲಿ ಕೇಂದ್ರೀಕೃತಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚೆಯೇ ನಡೆಯುತ್ತಿಲ್ಲ. ತಾವೇ ದುಡಿದು ಸಂಪಾದಿಸಿದ ದುಡ್ಡನ್ನು ಪಡೆಯಲು ಬ್ಯಾಂಕ್ ಮುಂದೆ ಕ್ಯೂ ನಿಂತು 100 ಮಂದಿ ಮೃತಪಟ್ಟಿದ್ದಾರೆ. ಇದು ಮೋದಿ ಸರಕಾರದ ಇತಿಹಾಸ ಎಂದು ಮಹಾಂತೇಶ ಹೇಳಿದರು.

ಇತ್ತೀಚೆಗೆ ಎನ್‌ಡಿಟಿವಿ ನಡೆಸಿದ ಸರ್ವೇ ಪ್ರಕಾರ ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ 35 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ ಎಲ್ಲೂ ಅವರು ದೇಶದ ನಿರುದ್ಯೋಗ, ಉದ್ಯೋಗ, ರೈತರ ಆತ್ಮಹತ್ಯೆ, ಕಪ್ಪುಹಣ, ಜಿಎಸ್‌ಟಿಯಿಂದ ಆಗಿರುವ ಸಮಸ್ಯೆ ಹಾಗೂ ನೋಟು ಬ್ಯಾನ್‌ನಿಂದ ಆಗಿರುವ ಅನಾಹುತದ ಬಗ್ಗೆ ಎಲ್ಲಿಯೂ ಪ್ರಸ್ತಾಪವನ್ನೇ ಮಾಡಿಲ್ಲ. 113 ಬಾರಿ ಪಾಕಿಸ್ತಾನದ ಹೆಸರು, 66 ಬಾರಿ ಬಾಲಕೋಟ್‌ನ ಹೆಸರನ್ನು ಪ್ರಸ್ತಾಪಿಸಿದ್ದಾರೆ.ಕೇವಲ 6 ಬಾರಿ ಮಾತ್ರ ಉದ್ಯೋಗ ಶಬ್ದವನ್ನು ಉಲ್ಲೇಖಿಸಿದ್ದಾರೆ ಎಂದು ಅವರು ಟೀಕಿಸಿದರು.

ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್, ಕೋಶಾಧಿಕಾರಿ ಉಮೇಶ್ ಕುಂದರ್, ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಶಶಿಧರ್ ಗೊಲ್ಲ, ವಿಶ್ವನಾಥ, ಪ್ರಭಾಕರ, ದಯಾನಂದ, ಶೇಖರ್ ಬಂಗೇರ, ಗಣೇಶ್ ನಾಯ್ಕಿ, ಸರೋಜ, ನಳಿನಿ, ವಾಮನ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News