ಅಂತರ್ಜಾತಿ ವಿವಾಹವಾದ ದಂಪತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಯುವತಿ ಮೃತ್ಯು

Update: 2019-05-06 16:05 GMT

ಅಹ್ಮದ್‌ನಗರ(ಮಹಾರಾಷ್ಟ್ರ),ಮೇ 6: ತಮ್ಮ ವಿರೋಧವಿದ್ದರೂ ಅಂತರ್ಜಾತೀಯ ಮದುವೆ ಮಾಡಿಕೊಂಡಿದ್ದಕ್ಕಾಗಿ ಯುವತಿಯ ತಂದೆ ಮತ್ತು ಸಂಬಂಧಿಗಳು ದಂಪತಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಕ್ರೂರ ಘಟನೆ ಜಿಲ್ಲೆಯ ಪಾರ್ನೇರ್ ತಾಲೂಕಿನ ನಿಘೋಜ್ ಗ್ರಾಮದಲ್ಲಿ ನಡೆದಿದೆ. ತೀವ್ರ ಸುಟ್ಟಗಾಯಗಳಾಗಿದ್ದ ಯುವತಿ ರವಿವಾರ ಪುಣೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರೆ,ಶೇ.40ರಷ್ಟು ಸುಟ್ಟಗಾಯಗಳಾಗಿರುವ ಆಕೆಯ ಪತಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ಕಟ್ಟಡ ನಿರ್ಮಾಣ ಕಾರ್ಮಿಕನಾಗಿರುವ ಮಂಗೇಶ ರಣಸಿಂಗ್(23) ಮತ್ತು ರುಕ್ಮಿಣಿ ಭಾರತೀಯ(23) ಬೇರೆ ಬೇರೆ ಜಾತಿಗಳಿಗ ಸೇರಿದ್ದು,ಪರಸ್ಪರ ಪ್ರೇಮಿಸುತ್ತಿದ್ದರು. ತನ್ನ ಹೆತ್ತವರು ವಿರೋಧಿಸಿದ್ದರೂ ರುಕ್ಮಿಣಿ ಕಳೆದ ವರ್ಷದ ನವೆಂಬರ್‌ನಲ್ಲಿ ಮಂಗೇಶನನ್ನು ಮದುವೆಯಾಗಿದ್ದಳು. ಎ.28ರಂದು ಆಕೆ ತವರಿಗೆ ಬಂದಿದ್ದು,ಮೇ 1ರಂದು ಆಕೆಯನ್ನು ತನ್ನ ಮನೆಗೆ ಕರೆದೊಯ್ಯಲು ಮಂಗೇಶ ಬಂದಿದ್ದ.

   ಆದರೆ ಯುವತಿಯ ತಂದೆ ರಾಮ ಭಾರತೀಯ,ಚಿಕ್ಕಪ್ಪ ಸುರೇಂದ್ರ ಕುಮಾರ ಮತ್ತು ಸೋದರಮಾವ ಘನಶ್ಯಾಮ ರಾಣೇಜ್ ದಂಪತಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಅವರ ಮೈಮೆಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ದಂಪತಿಯ ಆಕ್ರಂದನ ಕೇಳಿ ಧಾವಿಸಿ ಬಂದಿದ್ದ ನೆರೆಕರೆಯವರು ಅವರನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು,ರಾಮ ಭಾರತೀಯ ತಲೆ ಮರೆಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News