ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ
ಮಂಗಳೂರು, ಮೇ 8: ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಬುಧವಾರ ತೀರ್ಪು ನೀಡಿರುವ ಮಂಗಳೂರಿನ ಎರಡನೇ ಜಿಲ್ಲಾ ಹೆಚ್ಚುವರಿ ಮತ್ತು ಪೋಕ್ಸೊ ವಿಶೇಷ ನ್ಯಾಯಾಲಯ ಆರೋಪಿಗಳಿಗೆ 20 ವರ್ಷ ಕಠಿಣ ಸಜೆ ಮತ್ತು 20 ಸಾವಿರ ದಂಡ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಕೊಪ್ಪದಬೈಲು ಮನೆ ನಿವಾಸಿ ಸಚಿನ್ಕುಮಾರ್(22) ಮತ್ತು ಲಾಲಾ ಪಟ್ಲಾಡಿಯ ಅಂಕಜೆ ಮನೆಯ ಕೆ.ಟಿ.ಮ್ಯಾಥ್ಯೂ ಯಾನೆ ಮನು(24) ಶಿಕ್ಷೆಗೊಳಗಾದವರು.
ಘಟನೆ ವಿವರ: 2015ರ ಮಾರ್ಚ್ 7ರಂದು ಈ ಘಟನೆ ನಡೆದಿತ್ತು. ರಿಕ್ಷಾ ಚಾಲಕನಾಗಿದ್ದ ಮ್ಯಾಥ್ಯೂ ಮತ್ತು ಕೂಲಿ ಕೆಲಸ ಮಾಡಿಕೊಂಡಿದ್ದ ಸಚಿನ್ ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರವಾಗಿ ಅತ್ಯಾಚಾರಗೈದಿದ್ದರು.
ವಿದ್ಯಾರ್ಥಿನಿಯು ತರಗತಿ ಮುಗಿಸಿ ತನ್ನ ಮನೆಯತ್ತ ಸಾಗುತ್ತಿದ್ದಾಗ ಮಾರುತಿ ಓಮಿನಿ ಕಾರಿನಲ್ಲಿ ಬಂದ ಆರೋಪಿಗಳು, ‘ನಾವು ಕೂಡ ನಿಮ್ಮ ಮನೆಯತ್ತಲೇ ಹೋಗುತ್ತಿದ್ದೇವೆ, ಮನೆಯ ಬಳಿ ಬಿಡುತ್ತೇವೆ’ ಎಂದಿದ್ದರು. ಇದನ್ನು ಆಕೆ ಕೇಳದಿದ್ದರೂ ಬಲವಂತವಾಗಿ ಬರುವಂತೆ ಮಾಡಿ ಓಮಿನಿಯಲ್ಲಿ ಕುಳ್ಳಿರಿಸಿಕೊಂಡು ಕೊಯ್ಯೂರಿಯತ್ತ ಸಾಗಿದ್ದರು.
ಬಾಲಕಿಯು, ‘ನನ್ನ ಮನೆ ಬಂತು ಇಳಿಸಿ’ ಎಂದು ಹೇಳಿದರೂ ಇಳಿಸದೆ ಅಲ್ಲಿನ ದೂರದ ಗುಡ್ಡಕ್ಕೆ ಕೊಂಡೊಯ್ದು ಆರೋಪಿಗಳು ವಿದ್ಯಾರ್ಥಿನಿಯ ಇಚ್ಛೆಗೆ ವಿರುದ್ಧವಾಗಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದರು. ಮಧ್ಯಾಹ್ನ 3:30ಕ್ಕೆ ಮನೆಗೆ ಬರಬೇಕಿದ್ದ ಮಗಳು ಸಂಜೆ 5 ಗಂಟೆಯಾದರೂ ಬಾರದೆ ಇದ್ದುದರಿಂದ ಮನೆಯವರು ಗಲಿಬಿಲಿಗೊಂಡಿದ್ದರು.
ಬಳಿಕ ಮನೆಗೆ ಬಂದ ಮಗಳನ್ನು ತಾಯಿ ವಿಚಾರಿಸಿದಾಗ ಆಕೆ ವಿಷಯ ಬಹಿರಂಗಪಡಿಸಿದ್ದಳು. ತಕ್ಷಣ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಬಿ.ಆರ್.ಲಿಂಗಪ್ಪ ತನಿಖೆ ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸತತ ವಿಚಾರಣೆ ನಡೆದಿದ್ದು, ನ್ಯಾಯಾಲಯಕ್ಕೆ ಒಟ್ಟು 23 ದಾಖಲೆಗಳನ್ನು ಸಲ್ಲಿಸಲಾಗಿತ್ತು. 19 ಮಂದಿ ಸಾಕ್ಷ್ಯ ನುಡಿದಿದ್ದರು. ವಾದ-ವಿವಾದ ಆಲಿಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ಆರೋಪ ಸಾಬೀತಾಗಿರುವುದರಿಂದ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಐಪಿಸಿ ಸೆಕ್ಷನ್ 376(ಡಿ) ಮತ್ತು ಪೊಕ್ಸೋ ಕಾಯ್ದೆ ಕಲಂ (6)ರಡಿ ಶಿಕ್ಷೆ ವಿಧಿಸಲಾಗಿದ್ದು, ಐಪಿಸಿ ಸೆಕ್ಷನ್ 376(ಡಿ) ಪ್ರಕಾರ 20 ವರ್ಷ ಕಠಿಣ ಸಜೆ ಮತ್ತು 20 ಸಾವಿರ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 18 ಸಾವಿರ ರೂ.ನ್ನು ಸಂತ್ರಸ್ತೆಗೆ ನೀಡುವಂತೆ ಕೋರ್ಟ್ ಸೂಚಿಸಿದೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಕಾನೂನು ಸೇವಾ ಪ್ರಾಧಿಕಾರದಿಂದ ಹೆಚ್ಚುವರಿ ಪರಿಹಾರವನ್ನು ಪಡೆದುಕೊಳ್ಳುವಂತೆ ಕೋರ್ಟ್ ನೊಂದ ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಚಿಸಿದೆ.
ಸರಕಾರಿ ಅಭಿಯೋಜಕರಾಗಿ ಸಿ.ವೆಂಕಟರಮಣಸ್ವಾಮಿ ವಾದ ಮಂಡಿಸಿದ್ದರು.