ಇನೋಳಿ: ಬಿಐಟಿಯಲ್ಲಿ ಬ್ಯಾರೀಸ್ ಪ್ರತಿಭಾನ್ವೇಷಣೆ, ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ

Update: 2019-05-11 17:35 GMT

ಕೊಣಾಜೆ: ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ವತಿಯಿಂದ 'ಪ್ರತಿಭಾನ್ವೇಷಣೆ ಮತ್ತು ವಿದ್ಯಾರ್ಥಿವೇತನ ವಿತರಣೆ- 2019' ಕಾರ್ಯಕ್ರಮ ಶನಿವಾರ ಬ್ಯಾರೀಸ್ ಕಾಲೇಜಿನ ಅಂತರ್ ರಾಷ್ಟ್ರೀಯ ಸೆಮಿನಾರ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಸೈಯದ್ ಸಿದ್ದೀಕ್  ಬ್ಯಾರಿ ಅವರು, ನಾವು ಜೀವನ ದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ ನಮ್ಮ ಶೈಕ್ಷಣಿಕ ಅಡಿಗಲ್ಲು ಗಟ್ಟಿಯಾಗಿರಬೇಕು. ಬ್ಯಾರೀಸ್ ಕಾಲೇಜಿನಲ್ಲಿ ಆಯೋಜಿಸಿರುವ ಪ್ರತಿಭಾನ್ವೇಷಣೆಯಂತಹ ಕಾರ್ಯಕ್ರಮಗಳು ನಮ್ಮಲ್ಲಿ ಶೈಕ್ಷಣಿಕ ಆಯ್ಕೆಯ ಬಗ್ಗೆ ಅರಿವನ್ನು ಹೆಚ್ಚಿಸುವುದರೊಂದಿಗೆ ಭವಿಷ್ಯದ ಯೋಜನೆ ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಭಾರತವು ಯುವ ಸಮುದಾಯದ ರಾಷ್ಟ್ರವಾಗಿದ್ದು ಪ್ರತಿಭಾನ್ವಿತ ಯುವ ಸಮುದಾಯ ದೇಶದ ಸುಸ್ಥಿರ  ಅಭಿವೃದ್ಧಿಯಲ್ಲಿ  ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.

ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ರಾಜ್ಯದ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳಿಗೆ ಬಿಐಟಿಯ ಸ್ಕಾಲರ್ಶಿಪ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿದಾಯತ್ ಫೌಂಡೇಶನ್ ನ ಶಾದ್ ಅಹ್ಮದ್, ಕೆಎಂಡಿಸಿಯ ಜಿಲ್ಲಾ ಅಧಿಕಾರಿ ಮುಹಮ್ಮದ್ ಯೂನುಸ್, ಅಲ್ಪಸಂಖ್ಯಾತ ಇಲಾಖೆಯ ಮುಹಮ್ಮದ್ ನಝೀರ್, ನಸ್ರೀನ್ ಬಿಂತ್ ಅಹ್ಮದ್ ಬಾವ, ಬಿಐಟಿ ಪ್ರಾಂಶುಪಾಲರಾದ ಡಾ. ಮಹಾಬಲೇಶ್ವರಪ್ಪ, ಬೀಟ್ಸ್ ಪ್ರಾಂಶುಪಾಲರಾದ ಅಶೋಕ್ ಮೆಂಡೋನ್ಸಾ, ಪಾಲಿಟೆಕ್ನಿಕ್ ನ ಡಾ.ಅಝೀಝ್ ಮುಸ್ತಫಾ, ಅಬ್ದುಲ್ಲಾ ಗುಬ್ಬಿ, ಮಮತಾ ಭಂಡಾರಿ, ಬಸವರಾಜು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಐಎಸ್ ಟಿಡಿ ಪ್ರಾಯೋಜಿತ ಪ್ರೊಜೆಕ್ಟ್ ಎಕ್ಸಿಬಿಷನ್ ಆ್ಯಂಡ್ ಕಾಂಪಿಟಿಷನ್ ಅಡಿಯಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳು ಮಾಡಿದಂತಹ ಪ್ರೊಜೆಕ್ಟ್ ಗಳನ್ನು ಪ್ರದರ್ಶಿಸಲಾಯಿತು.

ಬಿಐಟಿ ಮತ್ತು ಬ್ಯಾರೀಸ್ ಎನ್‌ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬಿಇಎಡಿಎಸ್)ನಲ್ಲಿ ಇಂಜಿನಿಯರಿಂಗ್/ ಆರ್ಕಿಟೆಕ್ಟರ್ ವಿಭಾಗದಲ್ಲಿ ದಾಖಲಾತಿ ಪಡೆಯಲಿರುವ ಎಲ್ಲಾ ಧರ್ಮಗಳ ಪ್ರತಿಭಾನ್ವಿತ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಶೇ. 100ರಷ್ಟು ವಿದ್ಯಾರ್ಥಿವೇತನ ದೊರಕುವಂತೆ ಮಾಡುವ ಉದ್ದೇಶದಿಂದ ಪ್ರತಿಭಾನ್ವೇಷಣೆ ಕಾರ್ಯಕ್ರಮವ  ಆಯೋಜಿಸಲಾಗಿತ್ತು.

ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಸಾಮಾನ್ಯ ಜ್ಞಾನದ ಕುರಿತಂತೆ 75 ನಿಮಿಷಗಳ ಪ್ರಶ್ನೆಗಳನ್ನು ಒಳಗೊಂಡ ಪ್ರತಿಭಾನ್ವೇಷಣೆ ಪರೀಕ್ಷೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರಿನ ಕೆಎಂಡಿಸಿ (ಕರ್ನಾಟಕ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮ) ಸಹಭಾಗಿತ್ವದಲ್ಲಿ ಅರಿವು ಲೋನ್ ಶಿಬಿರವನ್ನೂ ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News