ಅಕ್ರಮ ಮರಳು ಸಾಗಾಟ: ವಾಹನ ವಶ
Update: 2019-05-11 16:21 GMT
ಕೋಟ, ಮೇ 11: ಬಿಲ್ಲಾಡಿ ಗ್ರಾಮದ ಜಾನುವಾರುಕಟ್ಟೆ ರಾಹುತನ ಮನೆ ದೈವಸ್ಥಾನದ ಬಳಿ ಮೇ 11ರಂದು ಬೆಳಗಿನ ಜಾವ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನವನ್ನು ಕೋಟ ಪೊಲೀಸರು ಮರಳು ಸಹಿತ ವಶಪಡಿಸಿ ಕೊಂಡಿದ್ದಾರೆ.
ಬಿಲ್ಲಾಡಿ ಗ್ರಾಮದ ನೈಲಾಡಿಯ ನದಿಯ ತೋಡಿನಿಂದ ಸಂದೀಪ್ ನಾಯ್ಕ್ ಹಾಗೂ ರಾಘವೇಂದ್ರ ನಾಯ್ಕ್, ದೇವು ವಂಡಾರು ಎಂಬವರು ಅಕ್ರಮವಾಗಿ ಮರಳು ತೆಗೆದು ಮಿನಿ ಟಿಪ್ಪರ್ ವಾಹನದಲ್ಲಿ ಸಾಗಿಸುತ್ತಿದ್ದರು. ಈ ಕುರಿತು ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಮುಂದಿನಿಂದ ಬೆಂಗಾವಲಾಗಿ ಬೈಕಿನಲ್ಲಿ ಬರುತ್ತಿದ್ದ ಸಂದೀಪ್ ನಾಯ್ಕ್ ಪರಾರಿಯಾಗಿದ್ದಾರೆ.
ವಾಹನ ಚಾಲಕ ರವೀಂದ್ರ ಕೊಠಾರಿ ಹಾಗೂ ಮಿನಿ ಟಿಪ್ಪರ್ ಮತ್ತು ಅದರಲ್ಲಿದ್ದ 10ಸಾವಿರ ರೂ. ಮೌಲ್ಯದ ಒಂದೂವರೆ ಯುನಿಟ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.