×
Ad

ಮಂಗಳೂರು: ಇಂಡಿಯಾನಾ ಆಸ್ಪತ್ರೆಯಲ್ಲಿ ವಿದೇಶಿ ರೋಗಿಯ ಕಿಡ್ನಿ ಕಸಿ

Update: 2019-05-13 20:10 IST

ಮಂಗಳೂರು, ಮೇ 13: ನಗರದ ಇಂಡಿಯಾನಾ ಆಸ್ಪತ್ರೆಯಲ್ಲಿ ವಿದೇಶಿ ರೋಗಿಯೊಬ್ಬರ ಕಿಡ್ನಿ ಕಸಿಯನ್ನು ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಹೇಳಿದರು.

ಸೋಮವಾರ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆನ್ಯಾ ದೇಶದ ಕೃಷಿ ವಿಜ್ಞಾನಿ ಸುಮಾರು 58 ವರ್ಷ ಪ್ರಾಯದ ಫ್ರಾನ್ಸಿಸ್ ಜಾನ್ ಮುಸ್ಸೆಂಬಿಗೆ ಕಿಡ್ನಿ ತಜ್ಞರಾದ ಡಾ. ಪ್ರದೀಪ್ ಕೆ.ಜೆ. ಮತ್ತು ಡಾ. ಅಭಿಜಿತ್ ಶೆಟ್ಟಿ ನೇತೃತ್ವದ ವೈದ್ಯಕೀಯ ತಂಡವು ಮಾರ್ಚ್ 28ರಂದು ಕಿಡ್ನಿ ಕಸಿ ನಡೆಸಿತು ಎಂದರು.

ಮಂಗಳೂರಿನ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದೊಂದು ಮೈಲಿಗಲ್ಲಾಗಿದೆ. ವಿಶ್ವದಾದ್ಯಂತ ಸಾಕಷ್ಟು ರೋಗಿಗಳು ಮಂಗಳೂರಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಆ ಪೈಕಿ ವಿದೇಶಿ ರೋಗಿಯೊಬ್ಬರಿಗೆ ಕಿಡ್ನಿ ಕಸಿ ಮಾಡಿದ ಮೊದಲ ಪ್ರಕರಣ ಇದಾಗಿದೆ. ರೋಗಿಯು ಇದೀಗ ಆರೋಗ್ಯದಿಂದ ಇದ್ದು, ಚಿಕಿತ್ಸೆಯಿಂದ ಹರ್ಷಿತರಾಗಿದ್ದಾರೆ ಎಂದು ಡಾ. ಯೂಸುಫ್ ಕುಂಬ್ಳೆ ನುಡಿದರು.

ಫ್ರಾನ್ಸಿಸ್ ಜಾನ್‌ಗೆ ಹಲವು ವರ್ಷಗಳಿಂದ ಮೂತ್ರಪಿಂಡದ ವೈಫಲ್ಯವಿತ್ತು. ವಾರದಲ್ಲಿ ಎರಡು ಬಾರಿ ಅವರು ಸುಮಾರು 70 ಕಿ.ಮೀ. ದೂರದಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಬೇಕಾಗಿತ್ತು.ಅಲ್ಲದೆ ಕೆನ್ಯಾದಲ್ಲಿ ಡಯಾಲಿಸಿಸ್ ಸಾಕಷ್ಟು ತ್ರಾಸದಾಯಕ ಮತ್ತು ದುಬಾರಿ ಚಿಕಿತ್ಸೆಯಾಗಿತ್ತು. ವಿವಾಹಿತರಾಗಿದ್ದ ಜಾನ್ ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಕೆನ್ಯಾದಲ್ಲಿ ಕೃಷಿ ವಿಜ್ಞಾನಿಯಾಗಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿದ ಅವರ ಏಳು ಮಂದಿ ಸಹೋದರರ ಪೈಕಿ ಒಬ್ಬರಾದ ಪ್ಯಾಟ್ರಿಕ್ ತನ್ನ ಕಿಡ್ನಿ ದಾನ ಮಾಡಲು ಒಪ್ಪಿದರು. ಇಂತಹ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇಂಡಿಯಾನಾ ಆಸ್ಪತ್ರೆಯು ಕೆನ್ಯಾ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಜಾನ್ ಇಂಡಿಯಾನಾ ಅಸ್ಪತ್ರೆಗೆ ದಾಖಲಾಗಿ ಕಿಡ್ನಿ ಕಸಿ ಚಿಕಿತ್ಸೆಗೊಳಗಾದರು ಎಂದು ಯೂಸುಫ್ ಮಾಹಿತಿ ನೀಡಿದರು.

ಈ ಸಂದರ್ಭ ಕಿಡ್ನಿ ಕಸಿಗೊಳಗಾದ ಫ್ರಾನ್ಸಿಸ್ ಜಾನ್, ಕೆನ್ಯಾದ ಡಾ. ಮಚಾರಿಯಾ ಸ್ಟಾನ್ಲಿ ಮೈನ, ಇಂಡಿಯಾನಾ ಆಸ್ಪತ್ರೆಯ ಡಾ. ಪ್ರದೀಪ್ ಕೆ.ಜೆ. ಮತ್ತು ಡಾ. ಅಭಿಜಿತ್ ಶೆಟ್ಟಿ, ಆಸ್ಪತ್ರೆತ ಸಿಇಒ ಸಮೀರ್ ಪಿ.ಟಿ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News