ಸೋಲುವ ಭೀತಿಯಿಂದ ಪ್ರಧಾನಿ ವ್ಯಕ್ತಿಗತ ದೂಷಣೆ: ಅಶೋಕ್ ಕೊಡವೂರು

Update: 2019-05-15 15:15 GMT

 ಉಡುಪಿ, ಮೇ 15:ದೇಶಕ್ಕಾಗಿ ಬಲಿದಾನ ಮಾಡಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಮೋದಿಯವರ ಹೇಳಿಕೆ ಖಂಡನೀಯ. ಬೋಫೋರ್ಸ್ ಪ್ರಕರಣದಲ್ಲಿ ನ್ಯಾಯಾಲಯವೇ ರಾಜೀವ್ ಗಾಂಧಿ ಅವರನ್ನು ದೋಷಮುಕ್ತಗೊಳಿಸಿದೆ. ಹೀಗಿರುವಾಗ 28 ವರ್ಷಗಳ ಹಿಂದೆ ಬಾಂಬ್ ಸ್ಫೋಟಕ್ಕೆ ಬಲಿಯಾದ ರಾಜೀವ್ ಗಾಂಧಿ ಸಾಯುವಾಗ ನಂ.1 ಭ್ರಷ್ಟಾಚಾರಿ ಯಾಗಿ ಸತ್ತರು ಎಂದು ಟೀಕಿಸುವ ಮೂಲಕ ಮೋದಿ ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಉಡುಪಿಯ ನಾಯರ್‌ಕೆರೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ಬ್ಲಾಕ್ ಅಧ್ಯಕ್ಷರುಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.

 ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತನಾಡಿ, ಅನಿವಾರ್ಯ ಕಾರಣಗಳಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಪಾಲಾಯಿತು. ಈ ಹಿನ್ನಲೆಯಲ್ಲಿ ಅನಿರೀಕ್ಷಿತವಾಗಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಬೇಕಾಯಿತು. ಪಕ್ಷದ ಹಾಗೂ ದೇಶದ ಹಿತದೃಷ್ಟಿಯಿಂದ ಎಲ್ಲಾ ಕಾರ್ಯಕರ್ತರು ಪ್ರಾಮಾಣಿಕವಾಗಿ ಒಮ್ಮನಸ್ಸಿನಿಂದ ನನ್ನನ್ನು ಬೆಂಬಲಿಸಿದ್ದಾರೆ. ನನ್ನನ್ನು ಬೆಂಬಲಿಸಿ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ಮಾಜಿ ಶಾಸಕ ಯು.ಆರ್. ಸಭಾಪತಿ ಮಾತನಾಡಿ, ಮೋದಿ ಆಡಳಿತದಲ್ಲಿ ಜನಸಾಮಾನ್ಯರ ನೆಮ್ಮದಿಗೆ ಭಂಗ ಉಂಟಾಗಿದೆ. ದೇಶ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದನ್ನು ಮರೆ ಮಾಚಲು ನರೇಂದ್ರ ಮೋದಿ ಸಭ್ಯತೆಯ ಗಡಿ ದಾಟಿ ವ್ಯಕ್ತಿಗತ ದೂಷಣೆಗೆ ಒತ್ತು ನೀಡುತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಪಂ ಚುನಾವಣೆ ಬರಲಿವೆ. ಅದಕ್ಕೆ ಈಗಿಂದಲೇ ಯುವಕರನ್ನು ಸಂಘಟಿಸಿ ಮುಂಚೂಣಿ ಘಟಕಗಳನ್ನು ಸಕ್ರಿಯಗೊಳಿಸಬೇಕು. ನಗರ ಸಮಿತಿಗಳನ್ನು ರಚಿಸಿ ನಗರದಲ್ಲಿ ಪಕ್ಷವನ್ನು ಇನ್ನಷ್ಟು ಸದೃಡಗೊಳಿಸುವ ಯೋಜನೆಯನ್ನು ರೂಪಿಸ ಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ ಮಾತನಾಡಿದರು. ಸಭೆಯಲ್ಲಿ ಪಕ್ಷದ ಮುಖಂಡರಾದ ಬಿ. ಹಿರಿಯಣ್ಣ, ನೀರೆಕೃಷ್ಣ ಶೆಟ್ಟಿ, ಸುದಾಕರ ಕೋಟ್ಯಾನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಭಾಸ್ಕರ್ ರಾವ್ ಕಿದಿಯೂರು, ಮಲ್ಯಾಡಿ ಶಿವರಾಮ ಶೆಟ್ಟಿ, ರಮೇಶ್ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಲೆ, ಸರಸು ಡಿ. ಬಂಗೇರಾ, ಡಾ. ಸುನಿತಾ ಶೆಟ್ಟಿ, ರೊಶನಿ ಒಲಿವರ್, ಕೇಶವ ಕೋಟ್ಯಾನ್, ಮದನ್ ಕುಮಾರ್, ಮಂಜುನಾಥ ಪೂಜಾರಿ, ಶಂಕರ್ ಕುಂದರ್, ಕಾಪು ದಿವಾಕರ ಶೆಟ್ಟಿ, ಶಬ್ಬೀರ್ ಅಹಮ್ಮದ್, ಪ್ರಖ್ಯಾತ್ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ನಿತ್ಯಾನಂದ ಶೆಟ್ಟಿ, ಸತೀಶ್ ಅಮೀನ್ ಪಡುಕರೆ, ವಿಶ್ವಾಸ್ ಅಮೀನ್, ಹಬೀಬ್ ಅಲಿ, ಸುರೇಶ್ ನಾಯ್ಕಾ, ಮಹಾಬಲ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ದಿಲೀಪ್ ಹೆಗ್ಡೆ ಕುಕ್ಕೆಹಳ್ಳಿ, ಇಸ್ಮಾಯಿಲ್ ಆತ್ರಾಡಿ, ಸತೀಶ್ ಪೂಜಾರಿ, ನಾರಾಯಣ ಕುಂದರ್, ಬಾಲಕೃಷ್ಣ ಪೂಜಾರಿ, ಜನಾರ್ದನ ಭಂಡಾರ್ಕಾರ್, ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News