ಮಂಗಳೂರು: ಮಿನಿ ಕಾರ್ ಮಾದರಿಯ ಬಜಾಜ್ ಕ್ಯೂಟ್ ವಾಹನ ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು, ಮೇ15: ನಗರದ ಸುಪ್ರೀಂ ಮೋಟಾರ್ಸ್ ಮತ್ತು ಸುಪ್ರೀಂ ಆಟೋಡೀಲರ್ಸ್ ಸಂಸ್ಥೆಯ ಆಶ್ರಯದಲ್ಲಿ ಬಜಾಜ್ ಮೋಟಾರ್ಸ್ ಸಂಸ್ಥೆಯ ನೂತನ ವಾಹನ ‘ಬಜಾಜ್ ಕ್ಯೂಟ್ ’ನ್ನು ಮಂಗಳೂರು ಮಾರುಕಟ್ಟೆಗೆ ಇಂದು ನಗರದ ಮಂಗಳಾದೇವಿ ಬಳಿಯ ಕಾಂತಿ ಚರ್ಚ್ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.
ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಬಜಾಜ್ ಮೋಟಾರ್ಸ್ ಸಂಸ್ಥೆ ಪ್ರಥಮ ಬಾರಿಗೆ ಚತುಷ್ಚಕ್ರ ಮೋಟಾರ್ ವಾಹನ ತಯಾರಿಕೆ ಆರಂಭಿಸಿದೆ. ಪೆಟ್ರೋಲ್ ಮೂಲಕ 35 ಕಿ.ಮೀಟರ್ ಸಿಎನ್ಜಿ ಕಿಟ್ ಮೂಲಕ 43 ಕಿ.ಮೀಟರ್ ಓಡಿಸಲು ಸಾಧ್ಯವಾಗುವ ಬಜಾಜ್ ಕ್ಯೂಟ್ ವಾಹನ ಮಿತ ವ್ಯಯದಿಂದ ಕೂಡಿದೆ.
ಕಡಿಮೆ ವಾಯು ಮಾಲಿನ್ಯಕ್ಕೆ ಕಾರಣವಾಗುವ ಕಾರಣ ಪರಿಸರ ಸ್ನೇಹಿ ವಾಹನವಾಗಿದೆ. ನಗರದಲ್ಲಿ ವಾಹನ ಸಂದಣಿಯ ನಡುವೆ ಹಾಗೂ ಅಗಲ ಕಿರಿದಾದ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಈ ಪುಟ್ಟ ವಾಹನ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಕಿಶೋರ್ ರಾವ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಬಜಾಜ್ ಕ್ಯೂಟ್ ವಾಹನವನ್ನು ಮೊದಲು ಪಡೆದ ಗ್ರಾಹಕರಾದ ಮಡಿಕೇರಿಯ ನಿವಾಸಿ ಕೌಸರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸುಪ್ರೀಂ ಮೊಟಾರ್ಸ್ ಹಾಗೂ ಆಟೋ ಡೀಲರ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಆರೂರು ಕಿಶೋರ್ರಾವ್, ಆಡಳಿತ ನಿರ್ದೇಶಕ ಅರ್ಜುನ್ ರಾವ್, ಎಚ್ಆರ್ ವಿಭಾಗದ ಮುಖ್ಯಸ್ಥ ರೋನಾಲ್ಡ್ ಸಿಕ್ವೇರಾ, ಮುಖ್ಯ ಅತಿಥಿಗಳಾಗಿ ಶ್ರೀ ರಾಮ ಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವೆಲೆನ್ಸಿಯಾದ ಶಾಖಾ ಪ್ರಬಂಧಕ ಚಂದ್ರಶೇಖರ ಶೆಟ್ಟಿ, ಕರಂಗಲ್ಪಾಡಿಯ ಕರೋರ್ ವೈಶ್ಯ ಬ್ಯಾಂಕ್ನ ಬ್ರಾಂಚ್ ಮ್ಯಾನೇಜರ್ ಜಯಚಂದ್ರ ಹೆಗ್ಡೆ, ಬಜಾಜ್ ಆಟೊ ಲಿಮಿಟೆಡ್ನ ಸರ್ವಿಸ್ ವಿಭಾಗದ ಡಿಜಿಎಂ ಅನಂತ ಪದ್ಮ ನಾಭ ಭಟ್, ಏರಿಯಾ ಸೇಲ್ಸ್ ಮ್ಯಾನೇಜರ್ ರಾಜೇಶ್ ನಾಯರ್, ಮನೋಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.