ಮೂಳೂರು ರೆಸಾರ್ಟ್‌ನಲ್ಲಿ ದೇವೇಗೌಡರ ಹುಟ್ಟುಹಬ್ಬ

Update: 2019-05-15 16:33 GMT

ಉಡುಪಿ, ಮೇ 15: ಕಳೆದೊಂದು ವಾರದಿಂದ ಪತ್ನಿ ಚೆನ್ನಮ್ಮ ಅವರೊಂದಿಗೆ ಮೂಳೂರಿನ ರೆಸಾರ್ಟ್‌ನಲ್ಲಿದ್ದು ಪ್ರಕೃತಿ ಚಿಕಿತ್ಸೆ ಪಡೆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದು ಸಂಜೆ ಇಲ್ಲಿಂದ ನಿರ್ಗಮಿಸುವ ಮುನ್ನ ರೆಸಾರ್ಟ್‌ನಲ್ಲೇ ಎಡ್ವಾನ್ಸ್ ಆಗಿ ತಮ್ಮ ಹುಟ್ಟುಹಬ್ಬವನ್ನು ಪಕ್ಷದ ಸ್ಥಳೀಯ ನಾಯಕರು, ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಆಚರಿಸಿಕೊಂಡರು.

ಮೂಳೂರಿನ ಸಾಯಿರಾಧ ಹೆಲ್ತ್ ರೆಸಾರ್ಟ್‌ನಲ್ಲಿ ದೇವೇಗೌಡ ದಂಪತಿ ಒಂದು ವಾರ ಕಾಲ ಇದ್ದು, ಪಂಚಕರ್ಮ ಸಹಿತ ಮಣಿಗಂಟು ನೋವಿಗೆ ಪ್ರಕೃತಿ ಚಿಕಿತ್ಸೆ ಪಡೆದು ಉಲ್ಲಸಿತರಾಗಿ ಇಲ್ಲಿಂದ ತೆರಳಿದರು.

ಇಂದು ರೆಸಾರ್ಟ್‌ನ ಆಡಳಿತ ಮಂಡಳಿ, ವೈದ್ಯರು ಹಾಗೂ ಸಿಬ್ಬಂದಿಗಳು ದೇವೇಗೌಡರಿಗೆ ಗೌರವ ಸಲ್ಲಿಸಿ ಬೀಳ್ಕೊಟ್ಟರು. ಈ ನಡುವೆ ಮೇ 18ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ದೇವೇಗೌಡರಿಗೆ ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಎಡ್ವಾನ್ಸ್ ಆಗಿ ಹುಟ್ಟುಹಬ್ಬದ ಆಚರಣೆಯೂ ನಡೆಯಿತು.

ನಗುನಗುತ್ತಾ ಕೇಕ್ ಕಟ್ ಮಾಡಿದ ದೇವೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಅವರಿಗೆ ಮೊದಲಿಗೆ ಕೇಕ್ ತಿನ್ನಿಸಿದರು. ಚಿಕಿತ್ಸೆ ಪೂರ್ಣಗೊಳಿಸಿ ದೇವೇಗೌಡರು ನಗುಮೊಗದಿಂದಲೇ ಶೃಂಗೇರಿಗೆ ಪ್ರಯಾಣ ಬೆಳೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News