ಅಕ್ರಮ ಮರಳು ದಾಸ್ತಾನು ಪತ್ತೆ: ಮರಳು, ಮೋಟಾರ್ ಸೈಕಲ್ ವಶಕ್ಕೆ
Update: 2019-05-15 16:49 GMT
ಉಡುಪಿ, ಮೇ 15: ಹಿರಿಯಡ್ಕ ಠಾಣೆ ವ್ಯಾಪ್ತಿಯ ಬೆಳ್ಳರಪಾಡಿ ಗ್ರಾಮದ ತಿಮ್ಮನ ಕುಮೇರಿ ಸೇತುವೆ ಬಳಿಯ ಬೆಳ್ಳರಪಾಡಿ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಹಾಗೂ ಮಾರಾಟಕ್ಕೆ ದಾಸ್ತಾನಿಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಮಂಗಳವಾರ ತುಂಬಿಸಿಟ್ಟಿದ್ದ ಮರಳು ಹಾಗೂ ಮೋಟಾರ್ ಸೈಕಲ್ನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆರೋಪಿ ರವಿ ಭಂಡಾರಿ ಇನ್ನೋರ್ವನೊಂದಿಗೆ ಸೇರಿಕೊಂಡು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 50 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿದ್ದ ಮರಳು ಹಾಗೂ 6 ಖಾಲಿ ಚೀಲ ಹಾಗೂ 20 ಸಾವಿರ ರೂ. ಮೌಲ್ಯದ ಬೈಕ್ನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.