ಮತ ಎಣಿಕೆ ಕೇಂದ್ರದಲ್ಲಿ ಸೂಚನೆಗಳನ್ನು ತಪ್ಪದೇ ಪಾಲಿಸಿ: ಏಜೆಂಟ್‌ಗಳಿಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Update: 2019-05-16 14:48 GMT

ಉಡುಪಿ, ಮೇ 16: ಮೇ 23ರಂದು ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ, ಮತ ಎಣಿಕೆ ಏಜೆಂಟ್‌ಗಳು ಜಿಲ್ಲಾಡಳಿತ ನೀಡುವ ಎಲ್ಲಾ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಗುರುವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್‌ರುಗಳ ಸಭೆ ಯಲ್ಲಿ ಅವರು ಮಾತನಾಡುತಿದ್ದರು.

ಮತ ಎಣಿಕೆ ದಿನ, ಮತ ಎಣಿಕೆ ಏಜೆಂಟ್‌ಗಳು ಬೆಳಗ್ಗೆ 6:30ರಿಂದ 7:00 ಗಂಟೆಯ ನಡುವೆ ಮತ ಎಣಿಕೆ ಕೇಂದ್ರದಲ್ಲಿ ತಪ್ಪದೇ ಹಾಜರಿರಬೇಕು. ಚುನಾವಣಾಧಿಕಾರಿ ವಿತರಿಸಿದ ಗುರುತಿನ ಚೀಟಿ ಇಲ್ಲವಾದಲ್ಲಿ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ.ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಯಾವ ಮೇಜಿನ ಏಜೆಂಟ್ ಆಗಿ ನೇಮಕಗೊಳಿಸಲಾಗಿದೆಯೋ ಅದೇ ಮೇಜಿನ ಬಳಿ ಬೆಳಗ್ಗೆ 7:30ರೊಳಗೆ ಉಪಸ್ಥಿತರಿರಬೇಕು ಎಂದವರು ತಿಳಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ಅನಗತ್ಯವಾಗಿ ಅತ್ತಿಂದಿತ್ತ ತಿರುಗಾಡಬಾರದು. ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಎಣಿಕೆ ಕೊಠಡಿಯಿಂದ ಹೊರಗೆ ಹೋಗುವಂತಿಲ್ಲ. ಚುನಾವಣಾ ಫಲಿತಾಂಶ ಘೊಷಣೆಯಾದ ನಂತರವೇ ಕೊಠಡಿಯಿಂದ ಹೊರಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಅಂಚೆ ಮತಪತ್ರಗಳ ಎಣಿಕೆಯನ್ನು ಬೆಳಗ್ಗೆ 8 ಗಂಟೆಗೆ ಸರಿಯಾಗಿ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ನಡೆಸಲಾಗುವುದು. ಅಂಚೆ ಮತಪತ್ರ ಎಣಿಕೆ ಮೇಜಿಗೆ ನೇಮಕಗೊಂಡ ಏಜೆಂಟರಿಗೆ ಮಾತ್ರ ಆ ಕೊಠಡಿಗೆ ಪ್ರವೇಶ ವಿದ್ದು, ಚುನಾವಣಾ ಅ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟ್‌ಗೆ ಮಾತ್ರ ಎಲ್ಲಾ ಮತ ಎಣಿಕೆ ಕೊಠಡಿಗಳಿಗೆ ಪ್ರವೇಶಿಸಿ, ಪರಿಶೀಲಿಸಲು ಅವಕಾಶವಿದೆ. ಉಳಿದ ಏಜೆಂಟರಿಗೆ ಇಲ್ಲ ಎಂದು ತಿಳಿಸಿದ ಡಿಸಿ, ಅಂಚೆ ಮತಪತ್ರ ಎಣಿಕೆ ಆರಂಭವಾಗಿ 30 ನಿಮಿಷಗಳ ನಂತರ ಮತಯಂತ್ರಗಳ ಎಣಿಕೆ ವಿಧಾನಸಭಾ ಕ್ಷೇತ್ರವಾರು ಕೊಠಡಿಗಳಲ್ಲಿ ಆರಂಭವಾಗಲಿದೆ ಎಂದರು.

5 ವಿವಿಪ್ಯಾಟ್ ಎಣಿಕೆ: ಅಂತಿಮ ಸುತ್ತಿನ ಮತ ಎಣಿಕೆ ಮುಗಿದ ಕೂಡಲೇ ಪ್ರತೀ ವಿಧಾನಸಭಾ ಕ್ಷೇತ್ರಗಳ ತಲಾ 5 ಮತಗಟ್ಟೆಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಐದು ಮತಗಟ್ಟೆಗಳ ವಿವಿ ಪ್ಯಾಟ್‌ಗಳ (ಒಟ್ಟು 40) ಪೇಪರ್ ಸ್ಲಿಪ್‌ಗಳನ್ನು ಎಣಿಕೆ ಮಾಡಲಾ ಗುತ್ತದೆ. ತದ ನಂತರ ಚುನಾವಣಾ ವೀಕ್ಷಕರ ಅನುಮೋದನೆ ಪಡೆದು ಫಲಿತಾಂಶವನ್ನು ಘೋಷಿಸಲಾಗುವುದು ಎಂದು ಡಿಸಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News