ಆಲ್ವಾರ್ ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿಯಾದ ರಾಹುಲ್
ಜೈಪುರ, ಮೇ 16: ರಾಜಸ್ಥಾನದ ಅಲ್ವಾರ್ನಲ್ಲಿ ಎಪ್ರಿಲ್ 26ರಂದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಭೇಟಿಯಾಗಿ ಸಾಂತ್ವನ ಹೇಳಿದರು.
ಅಪರಾಧಿಗಳ ವಿರುದ್ಧ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಂತ್ರಸ್ತ ಮಹಿಳೆಗೆ ನ್ಯಾಯ ದೊರೆಯಲಿದೆ ಎಂದು ಅವರು ಹೇಳಿದರು. ‘‘ಈ ಘಟನೆ ಬಗ್ಗೆ ಕೇಳಿದ ಬಳಿಕ ನಾನು ಅಶೋಕ್ ಗೆಹ್ಲೋಟ್ ಅವರಲ್ಲಿ ಮಾತನಾಡಿದೆ. ಇದು ನನಗೆ ರಾಜಕೀಯ ವಿಷಯ ಅಲ್ಲ. ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗಲಿದೆ, ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’’ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಪ್ರಕರಣವನ್ನು ರಾಜ್ಯ ಸರಕಾರ ನಿರ್ಲಕ್ಷಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಾನು ಇಲ್ಲಿಗೆ ಆಗಮಿಸಿರುವುದು ಈ ವಿಷಯದ ಕುರಿತು ರಾಜಕೀಯ ಮಾಡಲು ಅಲ್ಲ. ನಾನು ಇಲ್ಲಿಗೆ ಆಗಮಿಸಿರುವುದು ಸಂತ್ರಸ್ತ ಮಹಿಳೆ ಹಾಗೂ ಅವರ ಕುಟುಂಬವನ್ನು ಭೇಟಿಯಾಗಲು. ಅವರಿಗೆ ನ್ಯಾಯ ಸಿಗಲಿದೆ ಎಂದರು.