ಬಾಲಕನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಯ ಬಂಧನ

Update: 2019-05-17 16:45 GMT

ಪುತ್ತೂರು, ಮೇ 17: ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮದ್ರಸ ಅಧ್ಯಾಪಕ ರೊಬ್ಬರನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಪ್ರಸಕ್ತ ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿನ ಮದ್ರಸದಲ್ಲಿ ಅಧ್ಯಾಪಕನಾಗಿದ್ದ ಅನ್ವರ್ ವೌಲವಿ ಬಂಧಿತ ಆರೋಪಿ.

ಮಾರ್ಚ್ 3ರಂದು ಸಂಜೆ ಮದ್ರಸದ ನೆರೆಯ ವ್ಯಕ್ತಿಯೊಬ್ಬರು ಬಾಲಕನ ಮೂಲಕ ಮದ್ರಸ ಅಧ್ಯಾಪಕ ಅನ್ವರ್ ವೌಲವಿಗೆ ಚಹಾ-ತಿಂಡಿ ಕಳುಹಿಸಿಕೊಟ್ಟಿದ್ದರು. ವಿದ್ಯಾರ್ಥಿ ಚಹಾ-ತಿಂಡಿಯೊಂದಿಗೆ ಕೊಠಡಿ ಪ್ರವೇಶಿಸುತ್ತಿದ್ದಂತೆ ಆರೋಪಿ ಅನ್ವರ್ ಮದ್ರಸದ ಬಾಗಿಲು ಮುಚ್ಚಿ ವಿದ್ಯಾರ್ಥಿಯ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಬಳಿಕ ಎಪ್ರಿಲ್‌ನಲ್ಲಿ ಇದೇ ಕೃತ್ಯವನ್ನು ಎಸಗಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ನೊಂದ ಬಾಲಕ ಮದ್ರಸ ಹಾಗೂ ನಮಾಝ್‌ಗಾಗಿ ಮಸೀದಿಗೆ ಹೋಗದೇ ಇದ್ದುದನ್ನು ಗಮನಿಸಿದ ತಾಯಿ ಗುರುವಾರ ವಿಚಾರಿಸಿದ ವೇಳೆ ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ದೂರು ಸ್ವೀಕರಿಸಿರುವ ಪುತ್ತೂರು ಮಹಿಳಾ ಪೊಲೀಸರು ಆರೋಪಿ ಅನ್ವರ್ ಮೌಲವಿ ವಿರುದ್ಧ ಪೋಸ್ಕೋ ಪ್ರಕರಣದಡಿ ಕಾಲಂ 377, 342 ಮತ್ತು ಬೆದರಿಕೆಗೆ ಸಂಬಂಧಿಸಿ 506 ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News