ಮೇ19: ಆಳ್ವಾಸ್ನಲ್ಲಿ ಹೋಮಿಯೋಪಥಿ ರಾಷ್ಟ್ರೀಯ ಸಮಾವೇಶ
ಮೂಡುಬಿದಿರೆ : ಆಳ್ವಾಸ್ ಹೋಮಿಯೋಪಥಿ ಕಾಲೇಜು ಮತ್ತು ಭಾರತೀಯ ಹೋಮಿಯೋಪಥಿ ವೈದ್ಯ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಮೇ 19ರಂದು ರಾಷ್ಟ್ರೀಯ ಸಮಾವೇಶವು ನಡೆಯಲಿದೆ ಎಂದು ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ರಾಜ್ ಪಿ ತಿಳಿಸಿದ್ದಾರೆ.
ಅವರು ಶುಕ್ರವಾರ ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹೋಮಿಯೋಪಥಿಯ ಶ್ರೇಷ್ಠತೆಯನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ, ಹೋಮಿಯೋಪಥಿ ವೈದ್ಯ ವಿಜ್ಞಾನದ ಹೊಸ ಮಜಲುಗಳನ್ನು ಅನ್ವೇಷಿಸುವ ನಿರಂತರ ಪ್ರಯತ್ನಗಳು ಆಳ್ವಾಸ್ನಲ್ಲಿ ನಡೆಯುತ್ತಿದೆ. ಇದೀಗ ದೀರ್ಘಕಾಲೀನ ರೋಗಗಳಲ್ಲಿ ಹೋಮಿಯೋಪಥಿ ಚಿಕಿತ್ಸೆಯ ವಿವಿಧ ಆಯಾಮಗಳನ್ನು, ಪರಿಣಾಮಕಾರಿ ಚಿಕಿತ್ಸಾ ರೀತಿಯನ್ನು ಚರ್ಚಿಸುವುದು ಇದರ ಈ ಸಮಾವೇಶದ ಉದ್ದೇಶವಾಗಿದೆ.
ಸಮಾವೇಶದಲ್ಲಿ ಮುಂಬೈಯ ಅಂತರಾಷ್ಟ್ರೀಯ ಖ್ಯಾತಿಯ ಡಾ.ಅನಿತಾ ಸಾಲುಂಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದು, ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಘದ 8ನೇಯ ರಾಷ್ಟ್ರೀಯ ಸಮಾವೇಶವೂ ನಡೆಯಲಿದ್ದು ಸಂಘದ ಅಧ್ಯಕ್ಷ ಡಾ.ಅಜಿತ್ ಕುಮಾರ್, ಕಾರ್ಯದರ್ಶಿ ಡಾ.ಅರುಳ್ವನನ್ ಮುಂತಾದ ಪ್ರಮುಖರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ.ರೋಶನ್ ಪಿಂಟೋ, ಆಡಳಿತಾಧಿಕಾರಿ ಡಾ.ಪ್ರಜ್ಞಾ ಆಳ್ವ, ಸಮಾವೇಶದ ಆಯೋಜಕರಾದ ಡಾ.ವೈ.ಎಂ.ಖಾದ್ರಿ, ಡಾ.ಅರ್ಚನಾ ಸಿ.ಇಂಗೋಲೆ, ಭಾರತೀಯ ಹೋಮಿಯೋಪಥಿ ವೈದ್ಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಪ್ರವೀಣ್ ರೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.