ಮೇರಿಹಿಲ್: ಪ್ರವಾಹ ರಕ್ಷಣಾ ಮುನ್ಸೂಚನಾ ಸಭೆ; ಬೀಚ್, ನದಿಗಳಿಗೆ ಗೃಹರಕ್ಷಕರ ನಿಯೋಜನೆ

Update: 2019-05-18 17:47 GMT

ಮಂಗಳೂರು, ಮೇ 18: ಮುಂಬರುವ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಯುವ ಸಲುವಾಗಿ ಸೋಮೇಶ್ವರ, ಉಲ್ಲಾಳ, ಪಣಂಬೂರು, ತಣ್ಣೀರ್‌ಬಾವಿ, ಸಸಿಹಿತ್ಲು, ಫಾತಿಮ ಬೀಚ್, ಮೊಗವೀರ್ ಪಟ್ನ ಸುರತ್ಕಲ್ ಬೀಚ್‌ಗಳಿಗೆ ತಲಾ ಮೂವರು ಗೃಹರಕ್ಷಕ ರನ್ನು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಳಿ ಮೋಹನ್ ಚೂಂತಾರು ನಿಯೋಜಿಸಿದರು.

ನಗರದ ಮೇರಿಹಿಲ್ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಜಿಲ್ಲಾ ಸಮಾದೇಷ್ಟರ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಹ ರಕ್ಷಣಾ ಮುನ್ಸೂಚನೆ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಮಳೆಗಾಲದ ಸಮಯದಲ್ಲಿ ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾಮ ಸಂಗಮ, ಕಡಬದ ಹೊಸಮಠ ಸೇತುವೆ, ಸುಬ್ರಹ್ಮಣ್ಯದ ಕುಮಾರಧಾರ, ಸುಳ್ಯದಲ್ಲಿ ಜೋಡುಪಾಳ್ಯ ಹಾಗೂ ಪಯಾಸ್ವಿನ್, ಬಂಟ್ವಾಳದ ಬಿ.ಸಿ.ರಸ್ತೆ, ಬೆಳ್ತಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ಆಗುವ ಅನಾಹುತಗಳ ಪ್ರವಾಹಗಳ ರಕ್ಷಣಾ ಕಾರ್ಯಗಳಿಗೆ ತಲಾ ನಾಲ್ಕು ಗೃಹರಕ್ಷಕರನ್ನು ನಿಯೋಜಿಸಲು ಘಟಕಾಧಿಕಾರಿಗಳಿಗೆ ಡಾ.ಮುರಳಿ ಮೋಹನ್ ತಿಳಿಸಿದರು.

ಎಲ್ಲ ಘಟಕಾಧಿಕಾರಿಗಳಿಗೆ ತಮ್ಮತಮ್ಮ ಘಟಕಗಳಿಗೆ ಅಗತ್ಯವಿರುವ ಪ್ರವಾಹ ರಕ್ಷಣಾ ಸಲಕರಣೆಗಳ ಕೋರಿಕೆಯ ಪತ್ರವನ್ನು ನೀಡಲು ನಿರ್ದೇಶಿಸಲಾಯಿತು. ತಮ್ಮತಮ್ಮ ಘಟಕಗಳಲ್ಲಿರುವ ಮುಳುಗು ತಜ್ಞರು ಹಾಗೂ ಪ್ರವಾಹ ರಕ್ಷಣಾ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರನ್ನು ಸನ್ನದ್ಧಗೊಳಿಸಲು ಆದೇಶಿಸಿದರು.

ಸಭೆಯಲ್ಲಿ ಕಚೇರಿಯ ಉಪ ಸಮಾದೇಷ್ಟ ರಮೇಶ್, ಕಚೇರಿಯ ಅಧೀಕ್ಷಕ ರತ್ನಾಕರ್ ಹಾಗೂ ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್., ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‌ಶೇರ್, ಮುಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್, ಕಡಬದ ಸಾರ್ಜೆಂಟ್ ತೀರ್ಥೇಶ್, ಸುಬ್ರಹ್ಮಣ್ಯ ಘಟಕದ ಸಾರ್ಜೆಂಟ್ ಹರೀಶ್ವಂದ್ರ, ಸುಳ್ಯ ಘಟಕದ ಸಾರ್ಜೆಂಟ್ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News