ಸ್ವಚ್ಛ, ಸ್ವಸ್ಥ ಗ್ರಾಮ ನಿರ್ಮಾಣಕ್ಕೆ ಆಯುಷ್ ಗ್ರಾಮ ಅಭಿಯಾನ ಪೂರಕ
ಮುಡಿಪು, ಮೇ 22: ಬಂಟ್ವಾಳ ತಾಲೂಕಿನ ಬಾಳೆಪುಣಿ, ಕೈರಂಗಳ ಗ್ರಾಮಗಳಲ್ಲಿ ಅರಂಭವಾದ ಆಯುಷ್ ಗ್ರಾಮ ಅಭಿಯಾನವು ಸ್ವಚ್ಛ, ಸ್ವಸ್ಥ ಗ್ರಾಮ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಶಿಕ್ಷಣ ಪ್ರೇಮಿ ರಮೇಶ್ ಶೇಣವ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಆಯುಷ್ ಇಲಾಖೆ, ಫಾದರ್ ಮುಲ್ಲರ್ ಹೋಮಿಯೋಪತಿ ಮಹಾವಿದ್ಯಾಲಯ, ಗ್ರಾಪಂ, ಆಯುಷ್ ಫೌಂಡೇಶನ್, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಮುಡಿಪು ನವಚೇತನ ಜೀವ ಶಿಕ್ಷಣ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಆಯುಷ್ ಗ್ರಾಮ ಆರೋಗ್ಯ ಅಭಿಯಾನ ಕುರಿತ ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್.ಶೀನ ಶೆಟ್ಟಿ, ಜಿಪಂ ಸದಸ್ಯೆ ಮಮತಾ ಗಟ್ಟಿ, ಮಂಗಳೂರು ತಾಲೂಕು ಆಯುಷ್ ಅಧಿಕಾರಿ ಡಾ.ಸಹನಾ ಮಾತನಾಡಿದರು.
ಘನತ್ಯಾಜ್ಯಗಳನ್ನು ಸಂಪನ್ಮೂಲವಾಗಿ ಪರಿವರ್ತಿಸುವ ತ್ಯಾಜ್ಯ ನಿರ್ವಹಣಾ ಘಟಕವನ್ನು ಬಾಳೆಪುಣಿಯಲ್ಲಿ ಸ್ಥಾಪಿಸಿ ಬಾಳೆಪುಣಿ, ಕೈರಂಗಳವನ್ನು ತ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದೆಂದು ಪಿಡಿಒ ಸುನೀಲ್ ತಿಳಿಸಿದರು.
ಫಾದರ್ ಮುಲ್ಲರ್ ಹೋಮಿಯೋಪತಿ ಮಹಾವಿದ್ಯಾಲಯ ವತಿಯಿಂದ ನಡೆಸಲಾಗುವ ಸರ್ವ ಕುಟುಂಬ ಆರೋಗ್ಯ ಸ್ಥಿತಿಗತಿ ಅಧ್ಯಯನ ಸಮೀಕ್ಷಾ ಕಾರ್ಯವನ್ನು ನವಗ್ರಾಮ, ಗರಡಿಪಳ್ಳ, ದುರ್ಗಾಲಾಪು, ಬಂಗಾರುಗುಡ್ಡೆ ಜನ ವಸತಿ ಪ್ರದೇಶದಲ್ಲಿ ಏಕ ಕಾಲದಲ್ಲಿ ನಡೆಸುವುದು, ಸಮೀಕ್ಷೆಯ ನಂತರ ಎಲ್ಲಾ ಜನವಸತಿ ಪ್ರದೇಶಗಳಲ್ಲಿ ಉಚಿತ ಆಯುಷ್ ಆರೋಗ್ಯ ಶಿಬಿರ ಹಾಗೂ ಆಯುಷ್ ಆರೋಗ್ಯ ಅರಿವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಕಿರಿಯ ಆರೋಗ್ಯ ಸಹಾಯಕ ಸಂದೀಪ್, ಪರ್ತಕರ್ತ ಗುರುವಪ್ಪಬಾಳೆಪುಣಿ, ಪ್ರೇರಕಿ ಜಯಾ, ಒಡಿಯೂರು ಸೇವಾ ಸಂಸ್ಥೆಯ ಸೇವಾ ದೀಕ್ಷಿತೆ ಶಶಿಪ್ರಭಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್, ಜಾಗೃತಿ ವೇದಿಕೆಯ ಶಮೀಮಾ, ಘನ ತ್ಯಾಜ್ಯ ನಿರ್ವಾಹಕ ಇಸ್ಮಾಯೀಲ್, ಆಶಾ ಕಾರ್ಯಕರ್ತೆಯರು, ಜನ ಶಿಕ್ಷಣ ಟ್ರಸ್ಟ್ನ ಸಮಾಜ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಸಲಹೆ, ಸೂಚನೆಗಳನ್ನು ನೀಡಿದರು.
ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ ಸ್ವಾಗತಿಸಿದರು. ಗ್ರಾಪಂ ಸಿಬ್ಬಂದಿ ಸದಾನಂದ ವಂದಿಸಿದರು.