ಜಕ್ರಿಬೆಟ್ಟು ಇಂಟಕ್‌ವೆಲ್‌ಗೆ ಶಾಸಕ ರಾಜೇಶ್ ನಾಯಕ್ ಭೇಟಿ

Update: 2019-05-22 15:16 GMT

ಬಂಟ್ವಾಳ: ಪರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯಕ್ ಹಾಗೂ ಅಧಿಕಾರಿಗಳು ಬುಧವಾರ ಜಕ್ರಿಬೆಟ್ಟುವಿನ ಇಂಟಕ್‌ವೆಲ್‌ಗೆ ಭೇಟಿ ನೀಡಿ ಪಂಪಿಂಗ್ ವ್ಯವಸ್ಥೆಯನ್ನು ವೀಕ್ಷಿಸಿದರು.

ನಗರವಾಸಿಗಳಿಗೆ ನೀರು ಪೂರೈಸಲು ಇರುವ ನೀರಿನ ಲಭ್ಯತೆಯ ಬಗ್ಗೆ  ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ನೀರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಕ್ರಿಬೆಟ್ಟುವಿನ ನೀರು ಶುದ್ದೀಕರಣ ಘಟಕದ ಬಳಿ ಸುದ್ದಿಗಾರರೊಂದಿಗೆ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ತಾಲೂಕು ವ್ಯಾಫ್ತಿಯಲ್ಲಿ ಜನರ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಓಡಾಟ ನಡೆಸುತ್ತಿದ್ದು ನೀರಿನ ಸಮಸ್ಯೆ ತಲೆದೋರದಂತೆ ಪ್ರಯತ್ನ ನಡೆಸಿದ್ದೇವೆ. ಕೆಲ ದಿನಗಳಿಂದ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಮಂಗಳವಾರ ಸಂಜೆಯಿಂದ  ಬೋಟ್ ಇಟ್ಟು  ಡ್ರೆಜ್ಜಿಂಗ್ ಮೂಲಕ ನೀರು ಪಂಪ್ ಮಾಡಲಾಗುತ್ತಿದ್ದು ೮ ಗಂಟೆಗಳ ಪಂಪಿಂಗ್‌ನಲ್ಲಿ ೫ ಎಂಎಲ್‌ಡಿ ನೀರು ಸಂಗ್ರಹಗೊಂಡಿದ್ದು ಅದನ್ನು ನಗರದ ಜನರಿಗೆ ಒದಗಿಸಲಾಗಿದೆ.  ಬಂಟ್ವಾಳಕ್ಕೆ 8 ಎಂಎಲ್‌ಡಿ ನೀರಿನ ಅಗತ್ಯತೆ ಇದ್ದು 10 ರಿಂದ 12 ಗಂಟೆ ನೀರಿನ ಪಂಪಿಗ್ ಮಾಡಬೇಕಾಗುತ್ತದೆ. ಆದ್ದರಿಂದ  ನೀರಿಲ್ಲ ಎಂದು ಜನರು ಆತಂಕ ಪಡುವುದು ಬೇಡ, ಮೇಲ್ಭಾಗದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದು ಬಂಡೆಗಳು ಅಡ್ಡಲಾಗಿರುವುದರಿಂದ ನೀರು ಕೆಳ ಭಾಗಕ್ಕೆ ಹರಿದು ಬರುತ್ತಿಲ್ಲ. ಈಗ ಅಳವಡಿಸಿರುವಂತೆ ಡ್ರೆಜ್ಜಿಂಗ್ ಬೋಟನ್ನು ಅಲ್ಲಿಯೂ ಅಳವಡಿಸಿ ನೀರು ಪಂಪ್ ಮಾಡಿದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬಹುದು ಎಂದು ತಿಳಿಸಿದರು. 

ಪುರಸಭೆಯ ಜನರಿಗೆ ನೀರು ಪೂರೈಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದು  ಜನರಿಗೆ ತೊಂದರೆಯಾಗದಂತೆ ನೀರು ಕೊಡುತ್ತೇವೆ ಎಂದ ಅವರು  ಜನರು ನೀರಿನ ಅಗತ್ಯತೆಯನ್ನು ತಿಳಿದುಕೊಂಡು ಮಿತವಾಗಿ ಬಳಸುವಂತೆ ಮನವಿ ಮಾಡಿಕೊಂಡರು. 

ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ನೀರೊದಗಿಸಲು ಇನ್ನು ಹತ್ತು ದಿವಸಕ್ಕಾಗುವಷ್ಟು ನೀರಿದೆ. ನೀರಿನ ಕೊರತೆ ಇಲ್ಲ, ಆದರೆ ಮಿತಬಳಕೆಯ ಕುರಿತು ಜಾಗೃತಿಯೂ ಇರಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.

ಈ ಸಂದರ್ಭ ಪುರಸಭೆಯ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ದೇವದಾಸ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ, ಕ.ನ.ನೀ.ಸ.ಒ.ಮಂಡಳಿ ಇಂಜಿನಿಯರ್ ಶೋಭಾಲಕ್ಷ್ಮಿ, ಪುರಸಭೆ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಜೋಸೆಫ್ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News