ತಲಪಾಡಿ ಗ್ರಾಪಂ ಉಪಚುನಾವಣೆ: ಕಣದಲ್ಲಿದ್ದ ಅಭ್ಯರ್ಥಿ ಅವಿರೋಧ ಆಯ್ಕೆ
Update: 2019-05-22 15:56 GMT
ಮಂಗಳೂರು, ಮೇ 22: ತಾಲೂಕಿನ ತಲಪಾಡಿ ಗ್ರಾಮ ಪಂಚಾಯತ್ಗೆ ಒಂದು ಸದಸ್ಯ ಸ್ಥಾನಕ್ಕೆ ನಡೆಯಲಿದ್ದ ಉಪಚುನಾವಣೆಯ ಅಂತಿಮ ಕಣದಲ್ಲಿ ಓರ್ವ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಕ್ಷೇತ್ರದಲ್ಲಿ ನೀತಿಸಂಹಿತೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ತಲಪಾಡಿಯ 5ನೇ ಕ್ಷೇತ್ರಕ್ಕೆ ಒಂದು ನಾಮಪತ್ರ ಮಾತ್ರ ಸ್ವೀಕೃತಗೊಂಡಿದ್ದು, ನಾರ್ಲಪಡೀಲು ಉಷಾಲತಾ ಕೋಂ. ರಾಮಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಮಂಗಳೂರು ತಾಲೂಕಿನ ಪಡುಪೆರಾರ ಗ್ರಾಪಂ, ಪುತ್ತೂರು ತಾಲೂಕಿನ ಕಬಕ ಮತ್ತು ನೆಕ್ಕಿಲಾಡಿ ಗ್ರಾಪಂ, ಬೆಳ್ತಂಗಡಿ ತಾಲೂಕಿನ ಉಜರೆ ಮತ್ತು ಕೊಯ್ಯೂರು ಗ್ರಾಪಂಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.