ಜಗತ್ತಿಗೆ ಭಾರತೀಯರು ಕೊಟ್ಟ ಸ್ಪಷ್ಟ ಸಂದೇಶ: ಮಟ್ಟಾರು
ಉಡುಪಿ, ಮೇ 23: ದೇಶದ ಅಭಿವೃದ್ಧಿ, ಸುಭದ್ರತೆ, ಸಮರ್ಥ ನಾಯಕತ್ವಕ್ಕೆ ದೇಶದ ಜನತೆ ಮತ್ತೊಮ್ಮೆ ಮನ್ನಣೆಯನ್ನು ನೀಡಿದ್ದಾರೆ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಪಟ್ಟ ಅಲಂಕರಿಸುವಂತೆ ಬೆಂಬಲಿಸಿದ್ದಾರೆ. ಇದು ಜಗತ್ತಿಗೆ ಭಾರತೀಯರು ಕೊಟ್ಟ ಸ್ಪಷ್ಟ ಸಂದೇಶವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ವಿಕಾರಿ ನಾಮ ಸಂವತ್ಸರದಲ್ಲಿ ದೇಶದ ಜನತೆಯ ಆಶೀರ್ವಾದದಿಂದ ಪ್ರತಿಪಕ್ಷಗಳು ಬಿಕಾರಿಯಾದದ್ದು ಹೊಸ ಚರಿತ್ರೆಯ ನಿರ್ಮಾಣವಾಗಿದೆ. ಸ್ವಂತ ಹಿತಾಸಕ್ತಿಗೋಸ್ಕರ ದೇಶದ ಹಿತಾಸಕ್ತಿಯನ್ನು ಬಲಿಕೊಡಲು ಒಟ್ಟಾದ ಮಹಾ ಘಟಬಂಧನಕ್ಕೆ ಚೇತರಿಕೆಯಾಗದ ರೀತಿಯ ಆಘಾತವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿ ಪ್ರಪ್ರಥಮ ಬಾರಿಗೆ ಬಿಜೆಪಿ 24ಕ್ಕೂ ಹೆಚ್ಚು ಸ್ಥಾನವನ್ನು ಗಳಿಸಿದೆ. ಇದು ಮೈತ್ರಿ ಸರಕಾರ ವಿರುದ್ಧ ನೀಡಿದ ತೀರ್ಪಾಗಿದೆ. ನೈತಿಕತೆ ಎಂಬುದು ಕಾಂಗ್ರೇಸ್ ಜೆಡಿಎಸ್ ನಾಯಕರಿಗೆ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕೆಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.