ಮತ್ತೆ ಅಧಿಕಾರಕ್ಕೆ ಮೋದಿ ಸರಕಾರ: ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದು ಹೀಗೆ...

Update: 2019-05-23 17:17 GMT

ಒಂದಾಗಿ ನಾವು ಬೆಳೆಯೋಣ. ಒಂದಾಗಿ ನಾವೂ ಸಮೃದ್ಧಿ ಹೊಂದೋಣ. ಒಂದಾಗಿ ನಾವು ಬಲಿಷ್ಠ ಮತ್ತು ಎಲ್ಲರನ್ನೂ ಒಳಗೊಂಡ ಭಾರತವನ್ನು ನಿರ್ಮಿಸೋಣ. ವಿಜಯಿ ಭಾರತ

ನರೇಂದ್ರ ಮೋದಿ,ಪ್ರಧಾನಿ

ಈ ವಿಜಯವು ಭಾರತದ ವಿಜಯವಾಗಿದೆ. ಇದು ಯುವಜನರು,ಬಡವರು ಮತ್ತು ರೈತರ ಆಶಯಗಳ ವಿಜಯವಾಗಿದೆ. ಈ ಬೃಹತ್ ಗೆಲುವು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ನೀತಿ ಮತ್ತು ಅವರಲ್ಲಿ ಜನತೆಯ ನಂಬಿಕೆಯ ವಿಜಯವಾಗಿದೆ. ಕೋಟ್ಯಂತರ ಬಿಜೆಪಿ ಕಾರ್ಯಕರ್ತರ ಪರವಾಗಿ ನರೇಂದ್ರ ಮೋದಿಯವರಿಗೆ ನನ್ನ ಅಭಿನಂದನೆಗಳು

ಅಮಿತ್ ಶಾ,ಬಿಜೆಪಿ ಅಧ್ಯಕ್ಷ

ಈ ಐತಿಹಾಸಿಕ ವಿಜಯವು ನರೇಂದ್ರ ಮೋದಿಯವರ ದೂರದರ್ಶಿತ್ವದ ನಾಯಕತ್ವ,ಅಮಿತ್ ಶಾ ಅವರ ಸಾಮರ್ಥ್ಯ ಮತ್ತು ತಳಮಟ್ಟದಲ್ಲಿ ಮಿಲಿಯಾಂತರ ಬಿಜೆಪಿ ಕಾರ್ಯಕರ್ತರ ಕಠಿಣ ಶ್ರಮದ ಫಲಶ್ರುತಿಯಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಮತ್ತೊಮ್ಮೆ ಸ್ಪಷ್ಟ ಆದೇಶ ನೀಡಿರುವುದಕ್ಕಾಗಿ ಮತ್ತು ಮೋದಿಯವರ ಚತುರ ನಾಯಕತ್ವ ಹಾಗೂ ನವಭಾರತದ ಅವರ ದೂರದೃಷ್ಟಿಯಲ್ಲಿ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಕ್ಕಾಗಿ ಭಾರತದ ಜನತೆಗೆ ನನ್ನ ಕೃತಜ್ಞತೆಗಳು. ಮೋದಿ ಅವರೀಗ ನವ ಭಾರತ ನಿರ್ಮಾಣಕ್ಕೆ ಸರ್ವ ಸಜ್ಜಾಗಿದ್ದಾರೆ.

ರಾಜನಾಥ ಸಿಂಗ್,ಕೇಂದ್ರ ಗೃಹಸಚಿವ

ಈ ವಿಜಯವು ಇಡೀ ದೇಶವನ್ನು ಆವರಿಸಿದ ರಾಜಕೀಯ ಸುನಾಮಿಯಾಗಿದೆ. ಪೂರ್ವದಿಂದ ಪಶ್ಚಿಮದವರೆಗೆ, ಉತ್ತರದಿಂದ ದಕ್ಷಿಣದವರೆಗೆ ಜನರು ಸ್ಪಷ್ಟ, ಅಸಂದಿಗ್ಧ ಆಯ್ಕೆಗಾಗಿ ಮತ ನೀಡಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ದೇಶವೀಗ ಇನ್ನಷ್ಟು ಪ್ರಗತಿ ಹೊಂದಲಿದೆ.

ಸುರೇಶ ಪ್ರಭು,ಕೇಂದ್ರ ಸಚಿವ

ಭಾರತದ ಜನರು ನಮ್ಮನ್ನು ಆಶೀರ್ವದಿಸಿದ್ದಾರೆ. ನರೇಂದ್ರ ಮೋದಿ,ಅಮಿತ್ ಶಾ,ಎನ್‌ಡಿಎ ಮಿತ್ರಪಕ್ಷಗಳು ಮತ್ತು ನಾವೆಲ್ಲ ಕಾರ್ಯಕರ್ತರು ನಮ್ಮ ಸಾಧನೆ ಮತ್ತು ಸಂದೇಶವನ್ನು ದೇಶಾದ್ಯಂತ ತಲುಪಿಸಿಲು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದ್ದೇವೆ.

ಜಯಂತ ಸಿನ್ಹಾ,ಕೇಂದ್ರ ಸಚಿವರು

ಬಿಜೆಪಿಗೆ ಇಷ್ಟೊಂದು ಭಾರೀ ಗೆಲುವನ್ನು ತಂದು ಕೊಟ್ಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ದೇಶದ ಜನತೆಗೆ ನನ್ನ ಕೃತಜ್ಞತೆಗಳು.

ಸುಷ್ಮಾ ಸ್ವರಾಜ್,ವಿದೇಶಾಂಗ ವ್ಯವಹಾರಗಳ ಸಚಿವೆ

ಪ್ರಧಾನಿ ನರೇಂದ್ರ ಮೋದಿಯವರ ಅಭೂತಪೂರ್ವ ಗೆಲುವಿಗಾಗಿ ಅವರಿಗೆ ಅಭಿನಂದನೆಗಳು. ಜೈ ಹೋ ಬಾಬಾ ಕೇದಾರನಾಥ.

ಉಮಾ ಭಾರತಿ,ಕೇಂದ್ರ ಸಚಿವೆ

ಚುನಾವಣೋತ್ತರ ಸಮೀಕ್ಷೆಗಳು ಸರಿಯಾಗಿದ್ದವು ಎಂದಂತಾಯಿತು. ಅದ್ಭುತ ಸಾಧನೆಗಾಗಿ ಬಿಜೆಪಿ ಮತ್ತು ಎನ್‌ಡಿಎ ಅನ್ನು ಅಭಿನಂದಿಸುವುದಷ್ಟೇ ಬಾಕಿಯುಳಿದಿದೆ. ಗೆಲ್ಲುವ ಮೈತ್ರಿಕೂಟವನ್ನು ರಚಿಸಿಕೊಂಡಿದ್ದಕ್ಕಾಗಿ ಮತ್ತು ಅತ್ಯಂತ ವೃತ್ತಿಪರ ಪ್ರಚಾರಕ್ಕಾಗಿ ಮೋದಿ ಮತ್ತು ಶಾ ಜೋಡಿಗೆ ಹೆಗ್ಗಳಿಕೆಯನ್ನು ನೀಡಲೇಬೇಕು. ಮುಂದಿನ ಐದು ವರ್ಷಗಳು ನಿಮ್ಮವು.

ಉಮರ್ ಅಬ್ದುಲ್ಲಾ,ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ

ಗೌರವಾನ್ವಿತ ಪ್ರಿಯ ನರೇಂದ್ರ ಮೋದಿಜಿ,ಹೃತ್ಪೂರ್ವಕ ಅಭಿನಂದನೆಗಳು. ನೀವು ಅಂದುಕೊಂಡಿದ್ದನ್ನು ಸಾಧಿಸಿದ್ದೀರಿ. ದೇವರು ನಿಮ್ಮನ್ನು ಹರಸಲಿ.

ರಜನಿಕಾಂತ್,ತಮಿಳು ನಟ

ಐತಿಹಾಸಿಕ ಗೆಲುವಿಗಾಗಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಇಂದಿನ ದಿನವು ಖಂಡಿತವಾಗಿಯೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಸೇರಿದೆ. ಕಾಂಗ್ರೆಸ್ ಈಗ ಅಮಿತ್ ಶಾರಂತಹ ವ್ಯಕ್ತಿಯನ್ನು ಹುಡುಕಿಕೊಳ್ಳಬೇಕು.

ಮೆಹಬೂಬ ಮುಫ್ತಿ,ಪಿಡಿಪಿ ಅಧ್ಯಕ್ಷೆ

ಚುನಾವಣಾ ಫಲಿತಾಂಶ ನನ್ನ ಪಾಲಿಗೆ ಕಪಾಳಮೋಕ್ಷವಾಗಿದೆ,ಜೊತೆಗೆ ಇನ್ನಷ್ಟು ನಿಂದನೆಗಳು,ಟೀಕೆಗಳು ಮತ್ತು ಅವಹೇಳನಗಳು ಎದುರಾಗಲಿವೆ. ಆದರೆ ನನ್ನ ನಿಲುವಿಗೆ ಬದ್ಧನಾಗಿರುತ್ತೇನೆ. ಜಾತ್ಯತೀತ ಭಾರತಕ್ಕಾಗಿ ನನ್ನ ಹೋರಾಟ ಮುಂದುವರಿಯಲಿದೆ. ಇನ್ನಷ್ಟು ಕಠಿಣ ಹೋರಾಟದ ದಾರಿ ಈಗಷ್ಟೇ ಆರಂಭಗೊಂಡಿದೆ. ಈ ಪ್ರಯಾಣದಲ್ಲಿ ನನ್ನ ಜೊತೆಗಿದ್ದ ಪ್ರತಿಯೊಬ್ಬರಿಗೂ ನಾನು ಋಣಿಯಾಗಿದ್ದೇನೆ. ಜೈ ಹಿಂದ್

ಪ್ರಕಾಶ್ ರಾಜ್,ಬಹುಭಾಷಾ ನಟ

ಈ ಐತಿಹಾಸಿಕ ಜನಾದೇಶವು ನರೇಂದ್ರ ಮೋದಿಯವರ ಅರ್ಪಣಾ ಮನೋಭಾವ ಮತ್ತು ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರದ ಪ್ರಯತ್ನಗಳಿಗೆ ಸಿಕ್ಕಿರುವ ಗೆಲುವಾಗಿದೆ. ಮೋದಿ ಸರಕಾರದ ಐದು ವರ್ಷಗಳ ಆಡಳಿತಕ್ಕೆ ಜನತೆ ಒತ್ತಿರುವ ಈ ಯಶಸ್ಸಿನ ಮುದ್ರೆಯು ಭಾರತದ ಭವ್ಯ ಭವಿಷ್ಯವನ್ನು ಪುನರ್‌ದೃಢೀಕರಿಸಿದೆ.

ವಸುಂಧರಾ ರಾಜೆ,ರಾಜಸ್ಥಾನದ ಮಾಜಿ ಮುಖ್ಯಮಂತ್ರಿ

ಅದು ಚುನಾವಣೆಯಾಗಿರಲಿಲ್ಲ,ಅದು ಮೋದಿ ಸುನಾಮಿಯಾಗಿತ್ತು. ನರೇಂದ್ರ ಮೋದಿಯವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

 ರಾಮವಿಲಾಸ ಪಾಸ್ವಾನ್,ಕೇಂದ್ರ ಸಚಿವ

ನೂತನ ಸರಕಾರವು ದೇಶವನ್ನು ಅತ್ಯುನ್ನತ ಮಟ್ಟಕ್ಕೆ ಎತ್ತರಿಸಲಿದೆ. ಕಾಳಸಂತೆಯು ಸಂಪೂರ್ಣವಾಗಿ ನಿರ್ಮೂಲನವಾಗಲಿದೆ. ನಮ್ಮ ದೇಶವನ್ನು ದೋಚಿದ ಜನರು ಮೂಲೋತ್ಪಾಟನೆಗೊಳ್ಳಲಿದ್ದಾರೆ ಮತ್ತು ತೀವ್ರ ದಂಡನೆಗೊಳಗಾಗಲಿದ್ದಾರೆ. ಬಿಜೆಪಿಯ ಹಿಂದಿನ ಅಧಿಕಾರಾವಧಿಯನ್ನು ನಾವು ನೋಡಿದ್ದೇವೆ ಮತ್ತು ಮುಂದಿನ ಅವಧಿಯೂ ಅದೇ ರೀತಿ ಇರುತ್ತದೆ ಎಂದು ನನಗೆ ಭರವಸೆಯಿದೆ. ಭಾರತವು ವಿಶ್ವದಲ್ಲಿ ಮುಂಚೂಣಿಯ ರಾಷ್ಟ್ರವಾಗಲಿದೆ. ದೇಶವು ನಿರೀಕ್ಷೆಗಳನ್ನೂ ಮೀರಿ ಬೆಳೆಯಲಿದೆ. ರಾಜಕಾರಣಿಗಳಲ್ಲಿ ಇನ್ನು ಮುಂದೆ ಸ್ವಾರ್ಥದ ಉದ್ದೇಶವಿರುವುದಿಲ್ಲ.

ಡಾ.ಬಿ.ಆರ್.ಶೆಟ್ಟಿ,ಸ್ಥಾಪಕಾಧ್ಯಕ್ಷರು,ಎನ್‌ಎಂಸಿ ಹೆಲ್ತ್‌ಕೇರ್

 ಗೆಳೆಯ ನರೇಂದ್ರ ಮೋದಿ,ಚುನಾವಣೆಗಳಲ್ಲಿ ನಿಮ್ಮ ಬೃಹತ್ ವಿಜಯಕ್ಕಾಗಿ ಅಭಿನಂದನೆಗಳು. ಚುನಾವಣಾ ಫಲಿತಾಂಶಗಳು ನಿಮ್ಮ ನಾಯಕತ್ವ ಮತ್ತು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ನೀವು ಮುನ್ನಡೆಸುತ್ತಿರುವ ರೀತಿಯನ್ನು ಎತ್ತಿ ಹಿಡಿದಿವೆ. ನಮ್ಮ ನಡುವಿನ ಹಾಗೂ ಭಾರತ ಮತ್ತು ಇಸ್ರೇಲ್ ನಡುವಿನ ವೆುತ್ರಿಯನ್ನು ಬಲಗೊಳಿಸುವ ಕಾರ್ಯವನ್ನು ನಾವು ಮುಂದುವರಿಸೋಣ ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯೋಣ.

 ಬೆಂಜಮಿನ್ ನೆತನ್ಯಾಹು,ಇಸ್ರೇಲ್ ಪ್ರಧಾನಿ

ಭಾರತದ ಪ್ರಧಾನಿಯಾಗಿ ನೀವು(ಮೋದಿ) ನಮ್ಮ ಜನರ ನಡುವಿನ ಶತಮಾನಗಳಷ್ಟು ಹಳೆಯದಾದ ಮೈತ್ರಿ ಹಾಗೂ ರಷ್ಯಾ ಮತ್ತು ಭಾರತ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಇನ್ನಷ್ಟು ಬಲಗೊಳಿಸುತ್ತೀರಿ ಎನ್ನುವುದು ನನಗೆ ಮನದಟ್ಟಾಗಿದೆ.

 ವ್ಲಾದಿಮಿರ್ ಪುಟಿನ್,ರಷ್ಯಾ ಅಧ್ಯಕ್ಷ

 ಎನ್‌ಡಿಎ ನಿಮ್ಮ(ಮೋದಿ)ನಾಯಕತ್ವದಡಿ ಭಾರತದ 17ನೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಈ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳು.

 ಕ್ಸಿ ಜಿನ್‌ಪಿಂಗ್,ಚೀನಾ ಅಧ್ಯಕ್ಷ

 ನಿಮ್ಮ ವಿಜಯಕ್ಕಾಗಿ ಮತ್ತು ಜನತೆಯು ನಿಮ್ಮ ನಾಯಕತ್ವವನ್ನು ಪುನಃ ಒಪ್ಪಿಕೊಂಡಿರುವುದಕ್ಕಾಗಿ ಅಭಿನಂದನೆಗಳು. ಭವಿಷ್ಯದಲ್ಲಿ ಭಾರತದೊಂದಿಗೆ ಆತ್ಮೀಯ ಮತ್ತು ರಚನಾತ್ಮಕ ಸಂಬಂಧ ಮುಂದುವರಿಕೆಯನ್ನು ಶ್ರೀಲಂಕಾ ಎದುರು ನೋಡುತ್ತಿದೆ.

 ಮೈತ್ರಿಪಾಲ ಸಿರಿಸೇನಾ,ಶ್ರೀಲಂಕಾ ಅಧ್ಯಕ್ಷ

ಅಭೂತಪೂರ್ವ ಚುನಾವಣಾ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ಆತ್ಮೀಯ ಅಭಿನಂದನೆಗಳು. ಭವಿಷ್ಯದಲ್ಲಿ ಯಶಸ್ಸನ್ನು ನಾನು ಹಾರೈಸುತ್ತೇನೆ. ನಿಮ್ಮಾಂದಿಗೆ ನಿಕಟವಾಗಿ ಕಾರ್ಯಾಚರಿಸಲು ನಾನು ಎದುರು ನೋಡುತ್ತಿದ್ದೇನೆ.

ಕೆ.ಪಿ.ಶರ್ಮಾ ಒಲಿ,ನೇಪಾಳ ಪ್ರಧಾನಿ

ಬಲಿಷ್ಠ ಜನಾದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಸಹಕಾರ,ಶಾಂತಿ ಮತ್ತು ಸಮೃದ್ಧಿಯನ್ನು ಸಾಧಿಸಲು ನಮ್ಮೆರಡು ದೇಶಗಳ ನಡುವೆ ಸಹಕಾರ ವಿಸ್ತರಣೆಯನ್ನು ಅಫಘಾನಿಸ್ತಾನದ ಸರಕಾರ ಮತ್ತು ಜನತೆ ಎದುರು ನೋಡುತ್ತಿವೆ.

 ಅಶ್ರಫ್ ಘನಿ,ಅಫ್ಘಾನಿಸ್ತಾನ್ ಅಧ್ಯಕ್ಷ

ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಚುನಾವಣಾ ವಿಜಯಕ್ಕಾಗಿ ಅಭಿನಂದನೆಗಳು. ಮುಂದಿನ ವರ್ಷಗಳಲ್ಲಿ ಪೋರ್ಚುಗಲ್ ಮತ್ತು ಭಾರತದ ನಡುವಿನ ಸಂಬಂಧಗಳನ್ನು ಮೈತ್ರಿ ಮತ್ತು ಸಹಕಾರದ ಹೊಸ ಎತ್ತರಕ್ಕೊಯ್ಯಲು ನಾವು ಜೊತೆಯಾಗಿ ಶ್ರಮಿಸೋಣ.

 ಆ್ಯಂಟೋನಿಯೊ ಕೋಸ್ತಾ,ಪೋರ್ಚುಗಲ್ ಪ್ರಧಾನಿ

ಅದ್ಭುತ ವಿಜಯಕ್ಕಾಗಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ನಿಮ್ಮೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲು ನಾವು ಎದುರು ನೋಡುತ್ತಿದ್ದೇವೆ.

 ರನಿಲ್ ವಿಕ್ರಮಸಿಂಘೆ,ಶ್ರೀಲಂಕಾ ಪ್ರಧಾನಿ

ತಾಂಝಾನಿಯಾ ಸರಕಾರ ಮತ್ತು ಜನತೆಯ ಪರವಾಗಿ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಪುನರಾಯ್ಕೆ ಸಂದರ್ಭದಲ್ಲಿ ನನ್ನ ಅಭಿನಂದನೆಗಳು. ಇದು ನಿಮ್ಮ ದೇಶವಾಸಿಗಳು ನಿಮ್ಮಲ್ಲಿಟ್ಟಿರುವ ವಿಶ್ವಾಸವನ್ನು ಸೂಚಿಸುತ್ತದೆ. ದ್ವಿಪಕ್ಷೀಯ ಸಹಕಾರಗಳನ್ನು ಬಲಗೊಳಿಸುವ ನಮ್ಮ ಬದ್ಧತೆಯ ಬಗ್ಗೆ ಭರವಸೆ ನೀಡುತ್ತೇವೆ.

 ಡಾ.ಜಾನ್ ಮಘ್ಫುಲಿ,ತಾಂಝಾನಿಯಾ ಅಧ್ಯಕ್ಷ

ಭೂತಾನದ ಜನತೆಯ ಪರವಾಗಿ ಚುನಾವಣಾ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಮುಂದಿನ ವರ್ಷಗಳಲ್ಲಿ ನಿಮ್ಮೆಂದಿಗೆ ನಿಕಟವಾಗಿ ಕಾರ್ಯಾಚರಿಸುವುದನ್ನು ಎದುರು ನೋಡುತ್ತಿರುವ ನಾವು ನಿಮ್ಮ ನಾಯಕತ್ವದಡಿ ಭಾರತವು ಬೃಹತ್ ಯಶಸ್ಸು ಸಾಧಿಸಲೆಂದು ಪ್ರಾರ್ಥಿಸುತ್ತೇವೆ.

 ಲೋಟೇ ಶೆರಿಂಗ್,ಭೂತಾನ್ ಪ್ರಧಾನಿ

  ಐತಿಹಾಸಿಕ ವಿಜಯಕ್ಕಾಗಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಬಿಜೆಪಿ ನೇತೃತ್ವದ ಸರಕಾರದಲ್ಲಿ ಭಾರತೀಯರ ವಿಶ್ವಾಸವನ್ನು ಇದು ದೃಢಪಡಿಸಿದೆ. ಮಾಲ್ದೀವ್ಸ್-ಭಾರತ ನಡುವಿನ ಸಂಬಂಧಗಳು ಮತ್ತು ಸಹಕಾರಗಳು ಇನ್ನಷ್ಟು ಹೆಚ್ಚುವುದನ್ನು ನಾನು ಎದುರು ನೋಡುತ್ತಿದ್ದೇನೆ.

 ಇಬ್ರಾಹಿಂ ಮುಹಮ್ಮದ್ ಸಲಿಹ್,ಮಾಲ್ದೀವ್ಸ್ ಅಧ್ಯಕ್ಷ

ಒಡಿಶಾದಲ್ಲಿ ಇನ್ನೊಂದು ವಿಜಯಕ್ಕಾಗಿ ನವೀನ್ ಪಟ್ನಾಯಕ್ ಅವರಿಗೆ ಅಭಿನಂದನೆಗಳು. ಮುಂದಿನ ಅವಧಿಗಾಗಿ ಅವರಿಗೆ ಶುಭಹಾರೈಕೆಗಳು.

ಪ್ರಧಾನಿ ನರೇಂದ್ರ ಮೋದಿ

ಚುನಾವಣೆಯಲ್ಲಿ ಅಭೂತಪೂರ್ವ ವಿಜಯದತ್ತ ಬಿಜೆಪಿಯನ್ನು ಮುನ್ನಡೆಸಿದ್ದಕ್ಕಾಗಿ ನರೇಂದ್ರ ಭಾಯಿ ಮೋದಿಯವರಿಗೆ ಅಭಿನಂದನೆಗಳು. ಬಿಜೆಪಿಯ ಸಂದೇಶ ಪ್ರತಿಯೊಬ್ಬ ಮತದಾರರನ್ನು ತಲುಪುವಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪಕ್ಷದ ಎಲ್ಲ ಕಾರ್ಯಕರ್ತರು ಭಾರೀ ಶ್ರಮ ವಹಿಸಿದ್ದಾರೆ.

ಎಲ್.ಕೆ.ಆಡ್ವಾಣಿ,ಹಿರಿಯ ಬಿಜೆಪಿ ನಾಯಕ

ತನ್ನ ತಂಡವು ಸೋತಾಗ ಶತಕ ಬಾರಿಸಿದ ಆಟಗಾರನಂತೆ ನನಗೆ ಭಾಸವಾಗುತ್ತಿದೆ.

ಶಶಿ ತರೂರ್,ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News