ಉಚ್ಚಿಲ: ಬಿಜೆಪಿ ಕಾರ್ಯಕರ್ತನಿಂದ ಕಾಂಗ್ರೆಸ್ಸಿಗರ ಮನೆ ಅಂಗಳಕ್ಕೆ ಪಟಾಕಿ ಎಸೆತ
ಪಡುಬಿದ್ರಿ, ಮೇ 24: ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ರಾಜಕೀಯ ದ್ವೇಷದಿಂದ ಕಾಂಗ್ರೆಸ್ ಕಾರ್ಯಕರ್ತರ ಮನೆಯ ಅಂಗಳಕ್ಕೆ ಪಟಾಕಿ ಎಸೆದು, ಜೀವ ಬೆದರಿಕೆಯೊಡ್ಡಿರುವ ಘಟನೆ ಮೇ 23ರಂದು ರಾತ್ರಿ ಉಚ್ಚಿಲ ಸುಭಾಷ್ ರೋಡ್ ಎಂಬಲ್ಲಿ ನಡೆದಿದೆ.
ಸುಭಾಷ್ ರೋಡ್ನ ಶಾಲಿನಿ ಹಾಗೂ ಆಕೆಯ ಗಂಡ ಹರೀಶ್ ಸಾಲಿ ಯಾನ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಕೆಲಸ ಮುಗಿಸಿ ಮನೆಯ ಅಂಗಳದಲ್ಲಿ ಹೋಗುತ್ತಿದ್ದ ಶಾಲಿನಿ ಅವರ ಹಿಂದಿನಿಂದ ಬಂದ ಬಿಜೆಪಿ ಕಾರ್ಯಕರ್ತ ತೆಂಕ ಎರ್ಮಾಳಿನ ರಂಗ ಎಂಬಾತ ಶಾಲಿನಿ ಅವರನ್ನು ದೂಡಿ ಹಾಕಿದ್ದು, ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಶಾಲಿನಿ ಬೊಬ್ಬೆ ಹಾಕಿದಾಗ ಮನೆಯ ಒಳಗಿನಿಂದ ಗಂಡ ಹಾಗೂ ಇತರರು ಹೊರಗೆ ಬಂದರು.
ಈ ವೇಳೆ ರಂಗ ತನ್ನ ಕೈಯಲ್ಲಿದ್ದ ಪಟಾಕಿಗೆ ಬೆಂಕಿ ಹಚ್ಚಿ ಮನೆ ಅಂಗಳದಲ್ಲಿ ಎಸೆದು ಓಡಿ ಹೋಗಿ, ರಸ್ತೆಯಲ್ಲಿ ನಿಂತು ‘ದೈರ್ಯ ಇದ್ದರೆ ಇಲ್ಲಿ ಬಾ, ನಿನ್ನನ್ನು ನಾಳೆ ನೋಡಿಕೊಳ್ಳತ್ತೇನೆ ಎಂದು ಬೆದರಿಕೆ ಹಾಕಿ ಓಡಿ ಹೋಗಿದ್ದಾನೆ ಎಂದು ದೂರಲಾಗಿದೆ. ಈತ ಈ ಹಿಂದೆ ಹರೀಶ್ ಜೊತೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.