ಯಶಸ್ವಿ ಕಾರ್ಯನಿರ್ವಹಣೆ: ಕದ್ರಿ ಠಾಣೆ ಮೂವರು ಪೊಲೀಸರಿಗೆ ಶ್ಲಾಘನೆ ಪತ್ರ
Update: 2019-05-24 15:31 GMT
ಮಂಗಳೂರು, ಮೇ 24: ನಗರದಲ್ಲಿ ಗುರುವಾರ ಬಂದೋಬಸ್ತ್ ಯಶಸ್ವಿ ಕಾರ್ಯನಿರ್ವಹಣೆಗೆ ಕದ್ರಿ ಪೊಲೀಸ್ ಠಾಣೆಯ ಮೂವರು ಪೊಲೀಸರಿಗೆ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಶುಕ್ರವಾರ ಶ್ಲಾಘನೆ ಪತ್ರ ವಿತರಿಸಿದರು.
ಮಲ್ಲಿಕಟ್ಟೆ ಕಾಂಗ್ರೆಸ್ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿ ಸಂಚಾರ ದಟ್ಟಣೆಗೆ ಕಾರಣವಾಗುವುದನ್ನು ಕರ್ತವ್ಯದಲ್ಲಿದ್ದ ಪೊಲೀಸರಾದ ಗಿರೀಶ್ ಜೋಗಿ, ಹೇಮಲತಾ ಹಾಗೂ ಲತಾ ಅವರು ತಪ್ಪಿಸಿದ್ದರು. ಈ ಸಂದರ್ಭ ಕೆಲವರು ಪೊಲೀಸರೊಂದಿಗೆ ಒರಟಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿ ಮಾಡಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿದ ಆಯುಕ್ತರು ಮೂವರು ಪೊಲೀಸರನ್ನು ತನ್ನ ಕೊಠಡಿಗೆ ಕರೆಸಿ ಅವರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶ್ಲಾಘನೆ ಪತ್ರ ವಿತರಿಸಿದರು. ಕರ್ತವ್ಯಕ್ಕೆ ಅಡ್ಡಿ ಮಾಡಿದವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.