ಕರಾವಳಿಗರನ್ನು ತಾಯ್ನಡಿಗೆ ಕರೆತರಲು ಯತ್ನ: ಶಾಸಕ ಕಾಮತ್

Update: 2019-05-25 16:24 GMT

ಮಂಗಳೂರು, ಮೇ 25: ಉದ್ಯೋಗ ನಿಮಿತ್ತ ದ.ಕ. ಜಿಲ್ಲೆಯಿಂದ ಕುವೈತ್‌ಗೆ ತೆರಳಿದ್ದ 35ಮಂದಿ ಯುವಕರು ಸೇರಿದಂತೆ 200ಕ್ಕೂ ಅಧಿಕ ಮಂದಿ ಭಾರತೀಯರು ಅತಂತ್ರರಾಗಿದ್ದರು. ಈ ಬಗ್ಗೆ ತಕ್ಷಣವೇ ಸ್ಪಂದಿಸಿದ್ದು, ಕರಾವಳಿಯ ಸಂತ್ರಸ್ತರನ್ನು ಶೀಘ್ರದಲ್ಲಿಯೇ ತಾಯ್ನೆಡಿಗೆ ಕರೆತರಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಹಿತೈಷಿ ರಾಜ್ ಭಂಡಾರಿ ಅವರನ್ನು ದೂರವಾಣಿಯ ಮೂಲಕ, ಕುವೈತ್‌ನಲ್ಲಿ ಸಿಲುಕಿರುವ ಕರಾವಳಿಗರ ಬಗ್ಗೆ ಮಾಹಿತಿ ಕಲೆ ಹಾಕಲು ಕೇಳಿ ಕೊಂಡಿದ್ದೆ. ತಕ್ಷಣವೇ ಕಾರ್ಯಪ್ರವೃತರಾದ ರಾಜ್ ಭಂಡಾರಿ ಮತ್ತು ಭಾರತೀಯ ಪ್ರವಾಸಿ ಪರಿಷತ್‌ನ ತಂಡ ಕೊನೆಗೂ ಸಂಕಷ್ಟದಲ್ಲಿರುವ ನಮ್ಮ ಯುವಕ ರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಫೇಸ್‌ಬುಕ್‌ನ ಪೋಸ್ಟ್‌ವೊಂದರಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.

ಯುವಕರ ಎಲ್ಲ ದಾಖಲೆಗಳು ಈಗಾಗಲೇ ನಮ್ಮ ಕೈ ಸೇರಿವೆ. ರಾಜ್ ಭಂಡಾರಿ ಮತ್ತು ಭಾರತೀಯ ಪ್ರವಾಸಿ ಪರಿಷತ್ ಸದಸ್ಯರಿಗೆ ಧನ್ಯವಾದ. ಶೀಘ್ರವೇ ನಮ್ಮ ಯುವಕರನ್ನು ಮರಳಿ ತಾಯ್ನಡು ಸೇರಿಸಲು ಸರ್ವ ಪ್ರಯತ್ನವನ್ನೂ ಮಾಡುವುದಾಗಿ ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದ್ದಾರೆ.

ಕುವೈಟ್ ಘಟನೆ ಏನು?:  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವೀಡಿಯೊವೊಂದರಲ್ಲಿ ಸಂತ್ರಸ್ತ ಯುವಕರು ಕುವೈತ್‌ನಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ವೀಡಿಯೊದಲ್ಲಿ ಮಾತನಾಡಿದ ಗಣೇಶ್ ಎಂಬವರು, ‘ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲಕ ಪ್ರಸಾದ್ ಶೆಟ್ಟಿ ಎಂಬವರಿಗೆ 65 ಸಾವಿರ ರೂ.ನ್ನು ನೀಡಿ ಜ.7ರಂದು ಕುವೈತ್‌ಗೆ ಬಂದಿದ್ದೇವೆ. ಆತನ ಇಲ್ಲಿ ಬಂದ ಬಳಿಕ ಅತಂತ್ರರಾಗಿದ್ದೇವೆ’ ಎಂದು ಹೇಳಿದ್ದಾರೆ.

ಮಂಗಳೂರಿನಿಂದ ಬರುವಾಗ ಕುವೈತ್‌ನ ಕ್ಯಾಂಬ್ರಿಡ್ಜ್ ಎನ್ನುವ ಕಂಪನಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಕುವೈತ್‌ಗೆ ಬಂದ ಬಳಿಕ ಬೇರೆ ಕಂಪನಿಯಲ್ಲಿ ಕೆಲಸ ಕೊಡಿಸಿದ್ದಾರೆ. ಆ ಕಂಪನಿಯಲ್ಲಿ 5 ತಿಂಗಳಿನಿಂದ ದುಡಿಯುತ್ತಿದ್ದು, ಈ ತನಕ ಬಿಡಿಕಾಸು ಸಂಬಳವನ್ನೂ ನೀಡಿಲ್ಲ. ಇದರಿಂದ ನಾವು ತೀರಾ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಇದು ಮಾತ್ರವಲ್ಲದೆ ಈಗ ಊಟದ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಆಹಾರಕ್ಕಾಗಿ ನಾವು ಯಾರ್ಯಾರಲ್ಲಿ ಭಿಕ್ಷೆ ಬೇಡು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯುವಕರು ಅಲವತ್ತುಕೊಂಡಿದ್ದರು.

ಮಂಗಳೂರಿನಿಂದ ಕುವೈತ್‌ಗೆ ತೆರಳಿದ ತಂಡದಲ್ಲಿ ತುಂಬ ಮಂದಿ ರಮಝಾನ್ ಉಪವಾಸದಲ್ಲಿದ್ದು, ಸಂಬಳವಾಗದೆ ಸಂಕಷ್ಟದಲ್ಲಿದ್ದಾರೆ ಎಂದು ವೀಡಿಯೊ ದಲ್ಲಿ ಹೇಳಲಾಗಿದೆ. ಮಂಗಳೂರಿನ 35 ಮಂದಿ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಭಾರತದ 200ಕ್ಕೂ ಅಧಿಕ ಮಂದಿ ಇದ್ದಾರೆ. ಎಲ್ಲರದ್ದೂ ಇದೇ ಪರಿಸ್ಥಿತಿ ಎಂದು ವೀಡಿಯೊದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News