×
Ad

ಬೆಳ್ತಂಗಡಿ: ಸಿರಿಧಾನ್ಯ ಕೆಫೆ ಶುಭಾರಂಭ

Update: 2019-05-27 19:23 IST

ಬೆಳ್ತಂಗಡಿ: ಇಂದು ಪಾಶ್ಚಾತ್ಯ ಆಹಾರ ಪದ್ಧತಿಯ ಅವಲಂಬನೆ ಹೆಚ್ಚಾಗುತ್ತಿದ್ದು, ಭಾರತೀಯ ಮೂಲ ಆಹಾರ ಪದ್ಧತಿ ಮರೆಯಾಗುತ್ತಿದೆ. ಸಿರಿಧಾನ್ಯದಂತಹ ಪಾರಂಪರಿಕ ಆಹಾರ ಪದ್ಧತಿಯಿಂದ ಆರೋಗ್ಯ ವರ್ಧನೆಯಾಗುತ್ತದೆ ಎಂದು ಧರ್ಮಸ್ಥಳದ ಶ್ರದ್ಧಾ ಅಮಿತ್ ಹೇಳಿದರು.

ಅವರು ರವಿವಾರ ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಆವರಣದಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆ ಆಶ್ರಯದಲ್ಲಿ ನೂತನ ಸಿರಿಧಾನ್ಯ ಕೆಫೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಾತೆಯರು ತಮ್ಮ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಆಹಾರ ತಜ್ಞರಾಗುವ ಅವಶ್ಯಕತೆ ಇದೆ. ನಮ್ಮ ಹಿರಿಯರು ಅನುಸರಿಸುತ್ತಿದ್ದ ಪಾರಂಪರಿಕ ಆಹಾರ ಪದ್ಧತಿಯ ನಿರ್ಲಕ್ಷ್ಯ ಹಾಗೂ  ಪಾಶ್ಚಾತ್ಯ ಆಹಾರ ಕ್ರಮದ ಅವಲಂಬನೆಯಿಂದಾಗಿ ಇಂದು ಸಣ್ಣ ಮಕ್ಕಳು ಅನೇಕ ರೋಗಗಳಿಂದ ಪೀಡಿತರಾಗುತ್ತಾರೆ. ಆದುದರಿಂದ ನಾವು ನಮ್ಮ ಮೂಲ ಆಹಾರ ಪದ್ಧತಿಯನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ ಧಾರವಾಡದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕ ಹಾಗೂ ಪ್ರಯೋಗಲಾಯ ನಿರ್ಮಿಸಲಾಗಿದೆ. ಸಿರಿ ಸಿರಿಧಾನ್ಯ ಬೆಳೆಗಾರರಿಗೆ ಇದರಿಂದ ತುಂಬಾ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಧಾರವಾಡದ ಸಿರಿಧಾನ್ಯ ಆಹಾರ ತಜ್ಞೆ ಡಾ. ಶಕುಂತಲಾ ಸವದತ್ತಿ ಮಾಸೂರು ಮತ್ತು ಸಾವಯವ ಕೃಷಿಕ ಭದ್ರಾವತಿಯ ಈಶ್ವರನ್ ತೀರ್ಥ ಸಿರಿಧಾನ್ಯ ಬಳಕೆಯ ಮಹತ್ವದ ಬಗ್ಯೆ ಮಾಹಿತಿ ನೀಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಸೋನಿಯಾವರ್ಮ ಹಾಗೂ ನಿರ್ದೇಶಕರಾದ ಬೂದಪ್ಪ ಗೌಡ ಮತ್ತು ಮಮತಾ ರಾವ್ ಉಪಸ್ಥಿತರಿದ್ದರು.

ಸಿರಿ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್ ಸ್ವಾಗತಿಸಿದರು. ಯೋಜನಾಧಿಕಾರಿ ರೋಹಿತಾಕ್ಷ ಧನ್ಯವಾದವಿತ್ತರು. ರಾಮ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News