ಜೀವ ಬೆದರಿಕೆಗೆ ಹೆದರಲ್ಲ: ಮಿಥುನ್ ರೈ

Update: 2019-05-27 15:02 GMT

ಮಂಗಳೂರು, ಮೇ 27: ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೇ ಜಿಲ್ಲೆಯಲ್ಲಿ ಮತೀಯವಾದಿಗಳು ಅಟ್ಟಹಾಸ ಆರಂಭಿಸಿದ್ದಾರೆ. ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಯಾವುದೇ ದುಷ್ಟ ಶಕ್ತಿಗಳು ಜಿಲ್ಲೆಯ ಶಾಂತಿ, ಸಾಮರಸ್ಯಕ್ಕೆ ಒಡಕು ತಂದರೆ ಯುವ ಕಾಂಗ್ರೆಸ್ ಧ್ವನಿ ಎತ್ತಲಿದೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಿಥುನ್ ರೈ ತಿಳಿಸಿದ್ದಾರೆ.

ಜೀವಬೆದರಿಕೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಏಕತೆ, ಸಾಮರಸ್ಯಕ್ಕಾಗಿ ನಾನು ಬಲಿದಾನಕ್ಕೆ ಸಿದ್ಧ. ನನ್ನ ಬಲಿದಾನದಿಂದ ಜಿಲ್ಲೆಯಲ್ಲಿ ಸೌಹಾರ್ದ ನೆಲೆಸಲಿ. ನನಗೆ ಜೀವಬೆದರಿಕೆ ಹಾಕಿದ್ದು ಪುಂಡುಪೋಕರಿಗಳು. ಬೊಗಳುವ ನಾಯಿ ಕಚ್ಚುವುದಿಲ್ಲ. ಭಗವಂತ ನನಗೆ ಆಯುಷ್ಯ ಕೊಟ್ಟಲ್ಲಿವರೆಗೆ ನಾನು ಬದುಕಿರುತ್ತೇನೆ. ನನ್ನ ಹುಟ್ಟು, ಸಾವು ಭಗವಂತ ನಿರ್ಧರಿಸಿದ್ದಾನೆ ಎಂದಿದ್ದಾರೆ.

ಗೆದ್ದರೆ ಬಜರಂಗದಳವನ್ನು ನಿಷೇಧಿಸುತ್ತೇನೆ ಎಂಬ ಹೇಳಿಕೆಗೆ ಈ ಜೀವಬೆದರಿಕೆ ಹಾಕಿರುವ ಸಾಧ್ಯತೆ ಇಲ್ಲ. ನನ್ನ ನೈಜ ಹಿಂದುತ್ವವನ್ನು ಸಹಿಸದ ಮಂದಿ ಬೆದರಿಕೆ ಹಾಕಿದ್ದಾರೆ. ನನಗೆ ಈಗಾಗಲೇ ಪೊಲೀಸ್ ಭದ್ರತೆ ಇದೆ. ನನ್ನನ್ನು ಕಡಿಯುತ್ತೇನೆ ಎಂದವರಿಗೆ ಕಾಂಗ್ರೆಸ್ ಕಚೇರಿ, ಮಲ್ಲಿಕಟ್ಟೆಯ ವಿಳಾಸ ನೀಡುತ್ತೇನೆ. ರಾತ್ರಿವರೆಗೆ ಅಲ್ಲಿರುತ್ತೇನೆ ಎಂದು ಮಿಥುನ್ ರೈ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News