ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತ: ಲಾಲೂ ಪ್ರಸಾದ್ ಆರೋಗ್ಯದಲ್ಲಿ ಏರುಪೇರು

Update: 2019-05-27 17:18 GMT

ಪಟ್ನಾ, ಮೇ.27: ಬಿಹಾರದ ರಾಂಚಿಯಲ್ಲಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಆರ್‌ಐಎಂಎಸ್) ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಂದಿನಿಂದ ಮೌನಕ್ಕೆ ಜಾರಿರುವ ಲಾಲೂ ಯಾದವ್ ಅವರ ಆರೋಗ್ಯದಲ್ಲೂ ವ್ಯತ್ಯಯ ಉಂಟಾಗಿತ್ತು. ರವಿವಾರ ಮುಂಜಾನೆ ವಿದ್ಯುತ್ ಕಡಿತದ ಕಾರಣ ಅವರಿದ್ದ ಕೋಣೆಯ ಹವಾನಿಯಂತ್ರಣ ವ್ಯವಸ್ಥೆ ಸ್ತಭ್ಧಗೊಂಡ ನಂತರ ಲಾಲೂ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ರವಿವಾರ ಮುಂಜಾನೆ ಲಾಲೂ ಯಾದವ್ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಡಾ. ಡಿ.ಕೆ ಝಾ ಲಾಲೂ ಅವರನ್ನು ಉತ್ತಮ ಗಾಳಿ ಬೀಸುವ ಕೋಣೆಗೆ ವರ್ಗಾಯಿಸಿದ್ದಾರೆ ಅಲ್ಲಿ ಅವರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಗಿದೆ. ವಿದ್ಯುತ್ ಸಂಪರ್ಕ ಸರಿಹೋದ ನಂತರ ಲಾಲೂ ಅವರನ್ನು ಮತ್ತೆ ಹಿಂದಿನ ಕೋಣೆಗೆ ವರ್ಗಾಯಿಸಲಾಗಿದೆ.

ಆಸ್ಪತ್ರೆಯನ್ನು ಸಂಪರ್ಕಿಸುವ ಹೈ ಟೆನ್ಶನ್ ವೈರನ್ನು ಬದಲಾಯಿಸಲು ವಿದ್ಯುತ್ ಕಡಿತಗೊಳಿಸಲಾಗಿತ್ತು. ಲಾಲೂ ಯಾದವ್ ಕೋಣೆಗೆ ಮೀಸಲಿಟ್ಟಿದ್ದ ಜನರೇಟರ್‌ನ ಬ್ಯಾಟರಿ ಹಾಳಾಗಿದ್ದ ಕಾರಣ ಅದು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಆಸ್ಪತ್ರೆಯ ವರಿಷ್ಠಾಧಿಕಾರಿ ವಿವೇಕ್ ಕಶ್ಯಪ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News