‘ಮೋದಿ ಉತ್ಪನ್ನ’ವನ್ನು ಮಾರಿದ ಬಿಜೆಪಿ ಜಯಿಸಿದ್ದು ಹೀಗೆ: ಶಶಿ ತರೂರ್ ವಿವರಣೆ

Update: 2019-05-29 16:15 GMT

ಹೊಸದಿಲ್ಲಿ,ಮೇ 29: ಲೋಕಸಭಾ ಚುನಾವಣೆಯಲ್ಲಿ ಜನರು ತಮ್ಮ ಆರ್ಥಿಕ ಹಿತಾಸಕ್ತಿಗಾಗಿ ಮತ ಚಲಾಯಿಸಿರಲಿಲ್ಲ ಎಂದು ಹೇಳಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,ಪ್ರಧಾನಿ ನರೇಂದ್ರ ಮೋದಿಯವರು ತನ್ನ ‘ಉತ್ಪನ್ನ ’ಎಂದು ಮೊದಲೇ ನಿರ್ಧರಿಸಿದ್ದ ಬಿಜೆಪಿಯು ಅವರ ಹಿಂಬಾಲಕರ ಅಸಾಧಾರಣ ಪಂಥವೊಂದನ್ನು ಸೃಷ್ಟಿಸುವ ಮೂಲಕ ಅವರನ್ನು ಅತ್ಯುತ್ತಮವಾಗಿ ‘ಮಾರಾಟ’ ಮಾಡಿತ್ತು ಎಂದು ಹೇಳಿದ್ದಾರೆ.

ಚುನಾವಣೆಯನ್ನು ‘ಖಾಕಿ ಜನಾಭಿಪ್ರಾಯ’ವನ್ನಾಗಿ ಪರಿವರ್ತಿಸುವ ತನ್ನ ಪ್ರಯತ್ನದಲ್ಲಿ ಬಿಜೆಪಿ ಭಾರೀ ಯಶಸ್ಸು ಪಡೆದ ಉತ್ತರ ಭಾರತದಲ್ಲಿ ಜನಮಾನಸದಲ್ಲಿ ಚುನಾವಣಾ ವಿಷಯವಾಗಿ ರಾಷ್ಟ್ರೀಯ ಭದ್ರತೆಯ ಪರಿಣಾಮವನ್ನ್ನು ಕಾಂಗ್ರೆಸ್ ಕಡೆಗಣಿಸಿರಬಹುದು ಎಂದೂ ಅವರು ಹೇಳಿದರು.

ಕಾಂಗ್ರೆಸ್ ತನ್ನ ಕನಿಷ್ಠ ಆದಾಯ ಖಾತರಿ ಯೋಜನೆ ‘ನ್ಯಾಯ್’ ಅನ್ನು ಆರು ತಿಂಗಳ ಮೊದಲೇ ಪ್ರಕಟಿಸಿದ್ದರೆ ಅದು ಹೆಚ್ಚು ಮತಗಳನ್ನು ಪಡೆಯಬಹುದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ತರೂರ್,ಕೆಲವು ಮೂಲಭೂತ ವಿಷಯಗಳನ್ನು ನಾವು ತಪ್ಪಾಗಿ ಗ್ರಹಿಸಿದ್ದೆವು ಎನ್ನುವುದನ್ನು ಚುನಾವಣಾ ಫಲಿತಾಂಶಗಳು ಸ್ಪಷ್ಟಪಡಿಸಿವೆ ಎಂದು ನಾನು ಭಾವಿಸಿದ್ದೇನೆ. ಈ ವಿಷಯಗಳು ಯಾವುದಾಗಿದ್ದವು ಎನ್ನುವುದನ್ನು ನಿಖರವಾಗಿ ಗುರುತಿಸಲು ಆತ್ಮಾವಲೋಕನ ಮತ್ತು ಸಮಗ್ರ ಮೌಲ್ಯಮಾಪನ ಅಗತ್ಯವಾಗಿವೆ ಎಂದರು.

ನಿರುದ್ಯೋಗ ಸಮಸ್ಯೆ,ಕೃಷಿ ಬಿಕ್ಕಟ್ಟಿನಂತಹ ಘೋರ ಆರ್ಥಿಕ ಸಮಸ್ಯೆಗಳು ಮತ್ತು ನೋಟು ನಿಷೇಧದಂತಹ ಇತರ ಕ್ರಮಗಳ ವಿನಾಶಕಾರಿ ಪರಿಣಾಮ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎನ್ನುವುದು ಕಾಂಗ್ರೆಸ್‌ಗೆ ಮನವರಿಕೆಯಾಗಿತ್ತು. ಹೇಗಿದ್ದರೂ ಜನರು ತಮ್ಮ ಆರ್ಥಿಕ ಹಿತಾಸಕ್ತಿಗನುಗುಣವಾಗಿ ಮತವನ್ನು ಚಲಾಯಿಸುತ್ತ್ತಾರೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಈ ಬಾರಿ ಭಾರತೀಯ ಮತದಾರ ಅದನ್ನು ಮಾಡಲಿಲ್ಲ ಮತ್ತು ಏಕೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿರುವನಂತಪುರದಿಂದ ಲೋಕಸಭೆಗೆ ಮರುಆಯ್ಕೆಯಾಗಿರುವ ತರೂರ್ ನುಡಿದರು.

ಬಿಜೆಪಿ ನಿರ್ಣಾಯಕ ಸಂದೇಶಗಳನ್ನು ಉತ್ತಮವಾಗಿ ತಲುಪಿಸುತ್ತದೆ ಎನ್ನುವುದು ಬಹುಶಃ ಅದರ ವಿಜಯಕ್ಕೆ ಒಂದು ಕಾರಣವಾಗಿರಬಹುದು. ತಮ್ಮ ‘ಉತ್ಪನ್ನ’ ಮೋದಿ ಎಂದು ಅವರು ಬಹಳ ಮೊದಲೇ ನಿರ್ಧರಿಸಿದ್ದರು ಮತ್ತು ಅವರನ್ನು ಅತ್ಯುತ್ತಮವಾಗಿ ‘ಮಾರಾಟ ಮಾಡಿದರು ಎಂದ ಅವರು,ಬಿಜೆಪಿ ಮೋದಿಯವರನ್ನು ಪ್ರಮುಖವಾಗಿ ಬಿಂಬಿಸಲು ಅವರ ಹಿಂಬಾಲಕರ ಬೃಹತ್ ಪಡೆಯನ್ನು ಸೃಷ್ಟಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಕೋಟ್ಯಂತರ ಯೋಧರನ್ನು ರೂಪಿಸಿತ್ತು ಮತ್ತು ದಿನದ 24 ಗಂಟೆಯೂ ಪ್ರಚಾರ ವ್ಯವಸ್ಥೆ ನಿರಂತರವಾಗಿರುವಂತೆ ನೋಡಿಕೊಂಡಿತ್ತು. ಬಿಜೆಪಿ ಇದಕ್ಕಾಗಿ 5,600 ಕೋ.ರೂ.ಗಳ ತೆರಿಗೆದಾರರ ಹಣವನ್ನು ಬಳಸಿಕೊಂಡಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News