×
Ad

ದ.ಕ. ಪ್ರಾಥಮಿಕ 564, ಹೈಸ್ಕೂಲ್101 ಶಿಕ್ಷಕರ ಬೇಡಿಕೆ

Update: 2019-06-01 18:15 IST

ಮಂಗಳೂರು, ಜೂ.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿರುವಂತೆಯೇ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 564 ಹಾಗೂ ಹೈಸ್ಕೂಲ್‌ಗಳಿಗೆ 101 ಹೆಚ್ಚುವರಿ ಶಿಕ್ಷಕರ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.

ದ.ಕ. ಜಿಲ್ಲಾಪಂಚಾಯತ್‌ನ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಇಂದು ನಡೆದ ದ.ಕ. ಜಿಲ್ಲಾ ಶಿಕ್ಷಣ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಮಾಹಿತಿ ನೀಡಿದರು.

ಕಳೆದ ವರ್ಷ ಅತಿಥಿ ಶಿಕ್ಷಕರನ್ನಾಗಿ ಗುತ್ತಿಗೆ ಆಧಾರದಲ್ಲಿ ಪ್ರಾಥಮಿಕ ಶಾಲೆಗಳಿಗೆ 526 ಹಾಗೂ ಹೈಸ್ಕೂಲ್‌ಗಳಿಗೆ 89 ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಈ ಬಾರಿ ಪ್ರಥಮ ಆದ್ಯತೆಯಲ್ಲಿ ಅವರನ್ನು ಮುಂದುವರಿಸುವ ಜತೆಗೆ ಉಳಿದವರನ್ನು ನೇಮಕಕ್ಕೆ ಇಲಾಖೆ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

ಎಸೆಸೆಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕೇರಲು ಕ್ರಮ ವಹಿಸಿ

ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯು 7ನೆ ಸ್ಥಾನಕ್ಕೆ ಕುಸಿದಿದೆ. ಈ ಸ್ಥಾನವನ್ನು ಮತ್ತೆ 1ಕ್ಕೇರಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ವಹಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸಚಿವ ಖಾದರ್ ಸೂಚನೆ ನೀಡಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಸಂಖ್ಯೆ 9

ಕಳೆದ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್)ಗಳ ಸಂಖ್ಯೆ ಈ ಬಾರಿ 9ಕ್ಕೇರಿದೆ. ಬಂಟ್ವಾಳದ ಕನ್ಯಾನ, ಬೆಳ್ತಂಗಡಿಯ ಪುಂಜಾಲಕಟ್ಟೆ, ಮಂಗಳೂರು ದಕ್ಷಿಣದ ಮುತ್ತೂರು, ಪುತ್ತೂರಿನ ಕೆಯ್ಯೂರು, ಸುಳ್ಯದ ಬೆಳ್ಳಾರೆಯಲ್ಲಿ ಕಳೆದ ವರ್ಷದಿಂದ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗಿತ್ತು. ಈ ವರ್ಷದಿಂದ ಬಂಟ್ವಾಳದ ಮೊಂಟೆಪದವು, ಮೂಡಬಿದ್ರೆಯ ಮಿಜಾರು, ಪುತ್ತೂರಿನ ಕುಂಬ್ರ, ಸುಳ್ಯದ ಗಾಂಧಿನಗರದಲ್ಲಿ ಕೆಪಿಎಸ್ ಶಾಲೆಗಳು ಆರಂಭಗೊಂಡಿವೆ. ರಾಜ್ಯ ಸರಕಾರದಿಂದ ನಡೆಸಲ್ಪಡುವ ಈ ಶಾಲೆಗಳು 1ರಿಂದ ಪಿಯುಸಿಯವರೆಗೆ ಕೇಂದ್ರೀಯ ಪಠ್ಯಾಧರಿಸಿ ಮಾದರಿ ಶಾಲೆಗಳಾಗಿ ಕಾರ್ಯಾಚರಿಸುತ್ತವೆ ಎಂದು ಡಿಡಿಪಿಐ ಶಿವರಾಮಯ್ಯ ಮಾಹಿತಿ ನೀಡಿದರು.

ಆಂಗ್ಲ ಮಾಧ್ಯಮ ಶಾಲೆಗಳ ಬಗ್ಗೆ ಮೆಚ್ಚುಗೆ ಇದೆ. ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಯನ್ನೂ ಆರಂಭಿಸಬೇಕೆಂಬ ಬೇಡಿಕೆ ಇದೆ ಎಂದು ಜಿ.ಪಂ. ಸದಸ್ಯ ಶಾಹುಲ್ ಹಮೀದ್ ಸಭೆಯ ಗಮನ ಸೆಳೆದರು.

ಶಾಲೆಗಳಲ್ಲಿ ಇದೀಗ ಇಂಗ್ಲಿಷ್, ಹಿಂದಿಯ ಜತೆಗೆ ಇತರ ಅಂತಾರಾಷ್ಟ್ರೀಯ ಭಾಷೆಗಳನ್ನು ಕೂಡಾ ಕಲಿಸುವ ಅನಿವಾರ್ಯತೆಯ ಕಾಲಘಟ್ಟದಲ್ಲಿ ನಾವಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ 2020ಕ್ಕೆ ಸೀಮಿತವಾಗಿರದೆ 2050ರ ದೃಷ್ಟಿಕೋನದೊಂದಿಗೆ ನಾವು ಶಿಕ್ಷಣ ವ್ಯವಸ್ಥೆ ಯನ್ನು ಅಳವಡಿಸುವ ಅಗತ್ಯವಿದೆ ಎಂದು ಸಚಿವ ಖಾದರ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಮಮತಾ ಗಟ್ಟಿ, ಇಬ್ರಾಹಿಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News