ಕುಂದಾಪುರ: ಮ್ಯಾಂಗ್ರೋವ್ ಗಿಡ ನೆಡುವ ಕಾರ್ಯಕ್ರಮ
ಉಡುಪಿ, ಮೇ 31: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಅರಣ್ಯ ಇಲಾಖೆ ಕುಂದಾಪುರ ಇವರ ನೇತೃತ್ವದಲ್ಲಿ ಕುಂದಾಪುರದ ಮೂವತ್ತು ಮುಡಿ ಎಂಬ ಸಮುದ್ರ ಮತ್ತು ನದಿ ಸೇರುವ ಸ್ಥಳದಲ್ಲಿ 3000 ಮ್ಯಾಂಗ್ರೋವ್ ಗಿಡವನ್ನು ನೆಡುವ ಮೂಲಕ ಪ್ರಕೃತಿ ರಕ್ಷಣೆಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ಗಳು ಯಾವ ರೀತಿ ಮಾಡಬಹುದು ಎಂಬ ಕುರಿತು ಸಮಾಜಕ್ಕೆ ನಿದರ್ಶನ ನೀಡುವ ಉತ್ತಮ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಸ್ಕೌಟ್ಸ್-ಗೈಡ್ಸ್, ರೋವರ್-ರೇಂಜರ್ ವಿದ್ಯಾರ್ಥಿಗಳು ಉತ್ಸಾಹದಿಂದ ಮ್ಯಾಂಗ್ರೋವ್ ಗಿಡಗಳನ್ನು ನೆಟ್ಟರು. ಅರಣ್ಯ ಇಲಾಖೆಯ ಅಧಿಕಾರಿಗಳು ಮ್ಯಾಂಗ್ರೋವ್ ಗಿಡಗಳ ಬಗ್ಗೆ ಮಾಹಿತಿ ನೀಡಿ, ಅವುಗಳಿಂದ ಪರಿಸರಕ್ಕಿರುವ ಲಾಭದ ಕುರಿತು ತಿಳಿಸಿದರು. ಅಲ್ಲದೇ ಸಮುದ್ರ ಕೊರೆತ ತಡೆಗಟ್ಟುವಲ್ಲಿ ಈ ಗಿಡಗಳು ನಿರ್ವಹಿಸುವ ಪಾತ್ರವನ್ನು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ಅರಣ್ಯಾಧಿಕಾರಿಗಳು, ಇಲಾಖೆಯ ಸಿಬ್ಬಂದಿ ಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ 50 ಮಂದಿ ಸ್ಕೌಟ್ಸ್/ ಗೈಡ್ಸ್ ಹಾಗೂ ರೋವರ್ಸ್/ ರೇಂಜರ್ಸ್, ಜಿಲ್ಲಾ ಉಪಾಧ್ಯಕ್ಷೆ ಗುಣರತ್ನಾ, ಜಿಲ್ಲಾ ಸ್ಥಾನೀಯ ಆಯುಕ್ತ ಕೊಗ್ಗ ಗಾಣಿಗ, ಜಿಲ್ಲಾ ತರಬೇತಿ ಆಯುಕ್ತ ಆನಂದ್ ಅಡಿಗ ಮುಂತಾದವರು ಭಾಗವಹಿಸಿದ್ದರು.
ಜಿಲ್ಲಾ ಸಂಘಟಕರಾದ ಸುಮನ್ ಶೇಖರ್ ಹಾಗೂ ನಿತೀನ್ ಅಮೀನ್ ಕಾರ್ಯಕ್ರಮವನ್ನು ಸಂಘಟಿಸಿದರು.