ಎಲ್ಲರೊಂದಿಗೆ ಬೆರೆತು ವೃದ್ಯಾಪ್ಯವನ್ನು ಕಳೆಯಿರಿ: ಫಾ.ಸ್ಟ್ಯಾನಿ ಲೋಬೊ
ಉಡುಪಿ, ಜೂ.2: ಎಲ್ಲರೊಂದಿಗೆ ಸಂತೋಷದಿಂದ ಬೆರೆಯುವುದ ರೊಂದಿಗೆ ವೃದ್ಯಾಪ್ಯವನ್ನು ಅನಂದವಾಗಿ ಕಳೆಯಲು ಸಾಧ್ಯವಿದೆ. ನಗುವೊಂದೇ ಎಲ್ಲ ರೀತಿಯ ನೋವಿಗೆ ಪರಿಹಾರ ಎಂದು ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಹಾಗೂ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಪ್ರಧಾನ ಧರ್ಮಗುರು ವಂ.ಸ್ಟ್ಯಾನಿ ಬಿ.ಲೋಬೊ ಅಭಿಪ್ರಾಯಪಟ್ಟಿದ್ದಾರೆ.
ಕೆಥೊಲಿಕ್ ಸಭಾ ಉದ್ಯಾವರ ಘಟಕ, ಚರ್ಚಿನ ಕುಟುಂಬ ಆಯೋಗ ಹಾಗೂ ಉದ್ಯಾವರೈಟ್ಸ್ ದುಬಾಯಿ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಆಯೋಜಿಸಲಾದ ಹಿರಿಯರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಉದ್ಯಾವರ ಟ್ರಿನಿಟಿ ಐಟಿಐಯ ಜೋನ್ ಎಂ. ಡಿಸೋಜ ಮಾತನಾಡಿ, ಹಿರಿಯರು ಸಮಾಜದ ಕೀರ್ತಿಯಾಗಿ ಅವರು ತಮ್ಮ ಜೀವಿತಾವಧಿಯಲ್ಲಿ ತೋರಿದ ಸಾಧನೆಗೆ ಗೌರವ ತೋರಿಸುವುದು ಅಗತ್ಯ ವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉದ್ಯಾವರೈಟ್ಸ್ ದುಬಾಯಿ ಸಂಘಟನೆ ಪ್ರಾಯೋಜಕತ್ವದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ ಯೋಗದಲ್ಲಿ ಗಿನ್ನೆಸ್ ಸಾಧನೆ ಬರೆದ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿಯವರನ್ನು ಸನ್ಮಾನಿಸಲಾಯಿತು.
ಚರ್ಚಿನ ಸಹಾಯಕ ಧರ್ಮಗುರು ವಂ.ರೊಲ್ವೀನ್ ಆರಾನ್ಹಾ, ಅತಿಥಿ ಧರ್ಮಗುರು ವಂ.ಡೆನಿಸ್ ಡಿಸೋಜ, ಉದ್ಯಾವರ ಚಾರಿಟಿ ಕಾನ್ವೆಂಟ್ನ ಸುಪಿರೀಯರ್ ಸಿಸ್ಟರ್ ಗ್ರೇಸಿಯಾ, ಪಾಲೊಟ್ಟಾಯ್ನ್ ಕಾನ್ವೆಂಟ್ನ ಸಿಸ್ಟರ್ ಡಯಾನಾ, ಉದ್ಯಾವರ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, 18 ಆಯೋಗಗಳ ಸಂಚಾಲಕ ಗೋಡ್ ಫ್ರೀ ಡಿಸೋಜ, ಉಡುಪಿ ವಲಯ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ, ಉದ್ಯಾವರೈಟ್ಸ್ ದುಬಾಯ್ ಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಪಿರೇರಾ ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ಲಾರೆನ್ಸ್ ಡೆಸಾ ಸ್ವಾಗತಿಸಿ, ಕುಟುಂಬ ಆಯೋಗದ ಸಂಚಾಲಕ ವಿಲ್ಫ್ರೇಡ್ ಕ್ರಾಸ್ತಾ ವಂದಿಸಿ ದರು. ಮೇರಿ ಡಿಸೋಜ ಮತ್ತು ಉರ್ಬಾನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.